ಸೊರಬ: ಶುಂಠಿ ಬೆಳೆಯಲು ಅಳವಡಿಸಿದ್ದ ಲಕ್ಷಾಂತರ ರೂ. ವೆಚ್ಚದ ನೀರಿನ ಪೈಪ್ಗಳನ್ನು ತಾಲೂಕಿನ ಚಿಮಣೂರು ಗ್ರಾಮದ ಮುಖಂಡರೊಬ್ಬರು ಸುಟ್ಟು ನಾಶಪಡಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಎರಡು ರೈತ ಕುಟುಂಬಗಳು ಪ್ರತ್ಯೇಕವಾಗಿ ದೂರು ನೀಡಿವೆ.
ಚಿಮಣೂರು ಗ್ರಾಮದ ಮಹಾದೇವಪ್ಪ ಹಾಗೂ ಅವರ ಮಗ ದರ್ಶನ್, ಚಂದ್ರಕುಮಾರ್ ಹಾಗೂ ಅವರ ಮಕ್ಕಳಾದ ಸುನೀಲ್, ಸಚಿನ್ ಎಂಬುವರು ಮೇ 11ರಂದು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದಾಗ 20ಕ್ಕೂ ಅಧಿಕ ಮಂದಿಯ ಗುಂಪು ಕಟ್ಟಿಕೊಂಡು ಜಮೀನಿಗೆ ನುಗ್ಗಿದ ಗ್ರಾಮದ ಮುಖಂಡರೊಬ್ಬರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕುಟುಂಬ ಸದಸ್ಯರೊಂದಿಗೆ ಹೊಲದಲ್ಲಿ ಕೆಲಸ ಮಾಡುವ ವೇಳೆ ಅಲ್ಲಿಗೆ ಬೆಂಬಲಿಗರೊಂದಿಗೆ ಆಗಮಿಸಿದ ಗ್ರಾಮದ ಮುಖಂಡರೊಬ್ಬರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಶುಂಠಿ ಬೆಳೆಯಲು ಹಾಕಿದ್ದ ಪೈಪ್ಲೈನ್ ಹಾಳು ಮಾಡಿದ್ದಾರೆ. ಈ ವೇಳೆ ಅಡ್ಡಬಂದ ಮಗ ದರ್ಶನ್ ಮೇಲೆ ಹಲ್ಲೆ ನಡೆಸಿ ಜಮೀನು ಖಾಲಿ ಮಾಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಾದೇವಪ್ಪ ಪತ್ನಿ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚಂದ್ರಕುಮಾರ್ ಎಂಬುವರ ಮೇಲೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಚಂದ್ರಕುಮಾರ್ ಅವರ ಮಗ ಸುನೀಲ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಚಂದ್ರಕುಮಾರ್ ಕುಟುಂಬ ದೂರು ನೀಡಿದೆ.