ವಿಜಯಪುರ: ನೆರೆ ಪರಿಹಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ ಬಗ್ಗೆ ಗಮನಕ್ಕಿಲ್ಲ. ಈ ಕೂಡಲೇ ಆ ಬಗ್ಗೆ ಚರ್ಚಿಸಿ ವ್ಯತ್ಯಾಸ ಕಂಡು ಬಂದಲ್ಲಿ ಸರಿಪಡಿಸುವುದಾಗಿ ಜಿಲ್ಲೆ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದರು.
ತಾತ್ಕಾಲಿಕ ನೆರೆ ಪರಿಹಾರ ವಿತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಕೇವಲ 10 ಸಾವಿರ ರೂ. ನೀಡಿದ್ದು, ದಕ್ಷಿಣ ಕರ್ನಾಟಕಕ್ಕೆ25 ಸಾವಿರ ರೂ. ನೀಡಿದ್ದು ನಮಗೆ ಅನ್ಯಾಯವಾಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಈಗಾಗಲೇ ಜಿಲ್ಲೆಯಲ್ಲಿ 4441 ಕುಟುಂಬಗಳ ಖಾತೆಗೆ ರೂ. 10 ಸಾವಿರದಂತೆ ಹಣ ಜಮೆ ಮಾಡಲಾಗಿದೆ. ದಕ್ಷಿಣ ಕರ್ನಾಟಕದ ಸಂತ್ರಸ್ತರಿಗೆ ಸಿಎಂ 25 ಸಾವಿರ ರೂ. ತಕ್ಷಣದ ಪರಿಹಾರ ಘೋಷಿಸಿದ ಬಗ್ಗೆ ಮಾಹಿತಿ ಇಲ್ಲ. ಆ ಬಗ್ಗೆ ಮಾಹಿತಿ ಕಲೆ ಹಾಕಿ ಲೋಪ ಸರಿಪಡಿಸುವುದಾಗಿ ತಿಳಿಸಿದರು.
ಇನ್ನೂ 3 ವರ್ಷ ಬಿಎಸ್ ವೈ ಸಿಎಂ
ಮುಂದಿನ ಮೂರು ವರ್ಷ ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯುತ್ತಾರೆ. ಅದರಲ್ಲಿ ಅನುಮಾನ ಬೇಡ ಎಂದು ಶಾಸಕ ಯತ್ನಾಳ ಅನುಮಾನಕ್ಕೆ ತೆರೆ ಎಳೆದರು.
ಯಡಿಯೂರಪ್ಪ ಅವರು ಮುಂದಿನ ಮೂರು ವರ್ಷ ಸಿಎಂ ಆಗಿರುತ್ತಾರೆಂದು ನಾನೇನು ಹೇಳಲ್ಲ ಎಂದು ಯತ್ನಾಳರು ಅನುಮಾನ ವ್ಯಕ್ತಪಡಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳರು ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಯಡಿಯೂರಪ್ಪ ಅವರೇ ನಮ್ಮ ಸಿಎಂ ಎಂದು ದೃಢವಿಶ್ವಾಸ ವ್ಯಕ್ತಪಡಿಸಿದರು.
ಸಡಗರ ಕಸಿದ ಕರೊನಾ
ಕರೊನಾ ಮತ್ತು ನೆರೆ ರಾಜ್ಯೋತ್ಸವದ ಸಡಗರ ಕಸಿದುಕೊಂಡಿದೆ. ಸಂಕಷ್ಟದ ನಡುವೆಯೂ ಕನ್ನಡಾಭಿಮಾನ ಮೆರೆಯಲಾಯಿತು.
ಅತೀವೃಷ್ಟಿ- ನೆರೆ ನಿಭಾಯಿಸುವಲ್ಲಿ ಜಿಲ್ಲಾಡಳಿತದ ಪಾತ್ರ ಹಿರಿದು. 12 ಸಾವಿರ ಜನ ಸಂಕಷ್ಟಕ್ಕೀಡಾಗಿದ್ದರು. ಹತ್ತು ತಾಲೂಕು ನೆರೆ ಪೀಡಿತ ಎಂದಾಗಿದ್ದವು. ಇದೀಗ ಬಾಕಿ ಇರುವ ಚಡಚಣ ಹಾಗೂ ತಿಕೋಟಾ ತಾಲೂಕನ್ನು ಸಹ ಈ ವಾರದಲ್ಲಿ ನೆರೆ ಪೀಡಿತ ಎಂದು ಘೋಷಿಸಲಾಗುವುದು ಎಂದರು. ಈಗಾಗಲೆ 4441ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ. ಪರಿಹಾರ ನೀಡಲಾಗಿದೆ. ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಸುಮಾರು ಐವತ್ತು ಸಾವಿರ ಫಲಾನುಭವಿಗಳ ಮಾಹಿತಿ ಅಪ್ ಲೋಡ್ ಮಾಡಲಾಗಿದೆ. ಶೀಘ್ರದಲ್ಲೇ ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಎಸ್ ಪಿ ಅನುಪಮ್ ಅಗರವಾಲ್, ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.