ವಿಜಯಪುರ: ವೈಯಕ್ತಿಕ ಹಾಗೂ ವೃತ್ತಿ ಬದುಕು ಹಸನಾಗಬೇಕಾದರೆ ಶಿಕ್ಷಣ ಅತಿ ಮಹತ್ವವಾಗಿದೆ ಎಂದು ಪ್ರೇರಣಾ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿ, ಅಮೆರಿಕದ ಕ್ಯಾಲಿೆರ್ನಿಯಾದಲ್ಲಿ ಡಾಟಾ ಅನಾಲಿಸ್ಟ್ ಆಗಿರುವ ಪ್ರೊ.ಸುಮೀತ್ ದುದ್ದಗಿ ಹೇಳಿದರು.
ನಗರದ ಭೂತನಾಳದಲ್ಲಿರುವ ಪ್ರೇರಣಾ ಪಬ್ಲಿಕ್ ಶಾಲೆಗೆ ಸೋಮವಾರ ಭೇಟಿ ನೀಡಿದಾಗ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಪರಿಣಾಮಕಾರಿ ಕಲಿಕೆಗೆ ಬೇಕಿರುವುದು ಶ್ರದ್ಧೆ ಹಾಗೂ ಸಮಯ ಪರಿಪಾಲನೆ. ನಿರ್ದಿಷ್ಟ ಗುರಿಯೊಂದಿಗೆ ಎಷ್ಟೇ ಸಂಕಷ್ಟ ಬಂದರೂ ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಖಂಡಿತ ಎಂದು ಹೇಳಿದರು.
ತಮ್ಮ ಶಾಲೆಯ ದಿನಗಳ ಹಲವು ಘಟನೆಗಳನ್ನು ನೆನಪಿಸಿಕೊಂಡ ಸುಮೀತ್ ಅವರು, ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ಕಲಿತ ಪಾಠ ಹಾಗೂ ಸಂಸ್ಕೃತಿ ನನ್ನ ಯಶಸ್ವಿ ಬದುಕಿಗೆ ಪ್ರೇರಣೆಯಾಗಿದೆ ಎಂದರು. ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಶಾಲೆಯ ಚೇರ್ಮನ್ ಅರವಿಂದ ಪಾಟೀಲ ಮಾತನಾಡಿ, ತಮ್ಮ ಹಳೆಯ ವಿದ್ಯಾರ್ಥಿ ಸುಮೀತ್ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು ಶ್ಲಾಘನೀಯ. ಅವರ ಮಾತುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೇರಣಾದಾಯಕವಾಗಿದೆ. ಅವರು ಜೀವನದಲ್ಲಿ ಇನ್ನೂ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಪ್ರೇರಣಾ ಸಂಘ- ಸಂಸ್ಥೆಗಳ ನಿರ್ದೇಶಕ ಸುಕೃತ ಪಾಟೀಲ, ಶಾಲೆಯ ಪ್ರಾಚಾರ್ಯ ಸತೀಶ ಕವೀಶ್ವರ ಹಾಗೂ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.