ಹುಬ್ಬಳ್ಳಿ: ಲಾಕ್ಡೌನ್ ಸಡಿಲಿಸಿದ ನಂತರ ನಗರದಲ್ಲಿ ವಾಹನ ಹಾಗೂ ಜನದಟ್ಟಣೆ ಹೆಚ್ಚಿದ್ದು, ಮಾರುಕಟ್ಟೆಗಳಲ್ಲಿ ಪರಸ್ಪರ ಅಂತರ ಮರೆತು ಜನರು ವಿವಿಧ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದು ಮಂಗಳವಾರ ಕಂಡುಬಂದಿತು.
ಸ್ಟೇಶನ್ ರಸ್ತೆ, ದುರ್ಗದಬೈಲ್, ದಾಜಿಬಾನ ಪೇಟ, ಅಕ್ಕಿಹೊಂಡ ಸೇರಿದಂತೆ ಇತರೆಡೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬದ ಅಂಗವಾಗಿ ಬಟ್ಟೆ ಖರೀದಿಸುತ್ತಿದ್ದ ಜನರು, ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಮರೆತಿದ್ದರು.
ದುರ್ಗದಬೈಲ್ನ ಬಹುತೇಕ ಅಂಗಡಿಗಳ ಎದುರು ಪರಸ್ಪರ ಅಂತರ ಕಾಪಾಡುವುದಕ್ಕಾಗಿ ಗುರುತುಗಳನ್ನು ಹಾಕಿರುವುದು ಕಾಣಿಸಲಿಲ್ಲ. ಬಹುತೇಕ ಅಂಗಡಿಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯೂ ಇರಲಿಲ್ಲ. 7-8 ಜನರು ಅಂಗಡಿಯೊಳಗೆ ಗುಂಪುಗುಂಪಾಗಿ ನುಗ್ಗುತ್ತಿದ್ದರೂ ಅವರನ್ನು ತಡೆಯುವ ಗೊಡವೆಗೆ ಅಂಗಡಿಗಳ ಮಾಲೀಕರು ಹೋಗಲಿಲ್ಲ. ಪೊಲೀಸರು ಸಹ ನಿಗದಿತ ಸ್ಥಳದಲ್ಲಿ ಕುಳಿತಿದ್ದು, ಜನರನ್ನು ಚದುರಿಸಲು ಮುಂದಾಗಲಿಲ್ಲ.
ಬೆಳಗ್ಗೆ ಮಾರುಕಟ್ಟೆಯಲ್ಲಿ ದಟ್ಟಣೆ ಕಾಣದಿದ್ದರೂ ಮಧ್ಯಾಹ್ನದ ಹೊತ್ತಿಗೆ ದುರ್ಗದಬೈಲ್ಗೆ ಬರುವವರ ಸಂಖ್ಯೆ ಹೆಚ್ಚಿತು. ಮುಖ್ಯ ಹಾಗೂ ಒಳ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ದಿನಕ್ಕಿಂತ ಹೆಚ್ಚಾಗಿ ಇತ್ತು. ಹೋಟೆಲ್ಗಳಲ್ಲಿ ಉಪಾಹಾರ ಪಾರ್ಸಲ್ ಮಾತ್ರ ಕೊಡಲಾಗುತ್ತಿತ್ತು. ಆದರೆ ಹೋಟೆಲ್ ಎದುರು ನಿಂತು ಚಹಾ ಸೇವಿಸುತ್ತಿದ್ದ ದೃಶ್ಯ ಕೆಲವೆಡೆ ಕಾಣಿಸಿತು.
ಎಸ್ಬಿಐನಲ್ಲಿ ಕರೊನಾ ಪ್ರತಿಕೃತಿ
ಕೇಶ್ವಾಪುರದಲ್ಲಿರುವ ಎಸ್ಬಿಐ ಹುಬ್ಬಳ್ಳಿ ಮುಖ್ಯ ಶಾಖೆಯ ಪ್ರವೇಶ ದ್ವಾರದ ಬಳಿ ಕರೊನಾ ಸೋಂಕು ಪ್ರತಿಕೃತಿ ಪ್ರದರ್ಶಿಸುವ ಮೂಲಕ ಬ್ಯಾಂಕಿನ ಗ್ರಾಹಕರಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸೋಂಕಿನ ಪ್ರತಿಕೃತಿ ಸುತ್ತ ಮನೆಯಲ್ಲಿ ಸುರಕ್ಷಿತವಾಗಿ ಇರಿ, ಕರೊನಾ ವಿರುದ್ಧ ಹೋರಾಟ ಮಾಡೋಣ, ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಮೂಡಿಸುವ ವಿವಿಧ ಫಲಕಗಳನ್ನು ಇಡಲಾಗಿತ್ತು.
ರೈಲ್ವೆ ನಿಲ್ದಾಣದಲ್ಲಿ ದ್ರಾವಣ ಸಿಂಪಡಣೆ
ಮೇ 13 ಮತ್ತು 14ರಂದು ಹುಬ್ಬಳ್ಳಿ-ಜೋಧಪುರ- ಹುಬ್ಬಳ್ಳಿ ಮಧ್ಯೆ ಶ್ರಮಿಕ ಎಕ್ಸ್ಪ್ರೆಸ್ ರೈಲು ಸಂಚಾರ ಪ್ರಾರಂಭಗೊಳ್ಳಲಿರುವುದರಿಂದ ನಗರದ ರೈಲ್ವೆ ಸ್ಟೇಶನ್ನಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಸಲಾಯಿತು. ನಿಲ್ದಾಣದ ಉದ್ದಗಲಕ್ಕೂ ರಾಸಾಯನಿಕ ದ್ರಾವಣ ಸಿಂಪಡಿಸಲಾಯಿತು. ಮೇ 13 ಮತ್ತು 14ರಂದು ಹುಬ್ಬಳ್ಳಿಯಿಂದ ಹೊರಡುವ ಮತ್ತು ಮೇ 14 ಮತ್ತು 15ರಂದು ಜೋಧಪುರದಿಂದ ಬರಲಿರುವ ಶ್ರಮಿಕ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಚರಿಸುವ ಎಲ್ಲ ಕಾರ್ವಿುಕರ ಜ್ವರ ತಪಾಸಣೆ ನಡೆಸಲು ನಿಲ್ದಾಣದಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.