ವಿಜಯವಾಣಿ ಸುದ್ದಿಜಾಲ ಆನೇಕಲ್
ಕನ್ನಡ ಜಾಗೃತಿ ವೇದಿಕೆ ಸಂಘಟನೆ ಜನರ ಪರ ಹಾಗೂ ಈ ನಾಡಿನ ಮಣ್ಣಿನ ಪರವಾಗಿ ಸದಾ ಹೋರಾಟಕ್ಕೆ ಸಿದ್ಧ ಎಂದು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ ದೇವ ಹೇಳಿದರು.
ಕನ್ನಡ ಜಾಗೃತಿ ವೇದಿಕೆ ಸಂಘಟನೆಯ 30ನೇ ವಾರ್ಷಿಕೋತ್ಸವ ಪ್ರಯುಕ್ತ ತಾಲೂಕಿನ ಅತ್ತಿಬೆಲೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾವೇರಿ ನೀರಿಗಾಗಿ ನಮ್ಮ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹೋರಾಟ ಮಾಡುತ್ತಾ ಬಂದಿದೆ. ಈಗಾಗಲೇ ರಾಜ್ಯಾದ್ಯಂತ ಸಂಘಟನೆಯಲ್ಲಿ ಯುವಕ-ಯುವತಿಯರು ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟದ ಮೂಲಕ ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆ ಜಿಲ್ಲಾಧ್ಯಕ್ಷ ಕೆ.ನಾಗರಾಜ್ ಮಾತನಾಡಿ, ಸಂಘಟನೆ ನಿರಂತರವಾಗಿ ಭಾಷೆ ಹಾಗೂ ನೀರಿನ ವಿಚಾರದಲ್ಲಿ ಮುಂದೆ ನಿಂತು ಅತ್ತಿಬೆಲೆ ಗಡಿ ಸೇರಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಮೂಲಕ ಸರ್ಕಾರದ ಕಣ್ತೆರೆಸುವ ಕೆಲಸ ಮಾಡುತ್ತಿದೆ ಎಂದರು.
ಯುವ ಘಟಕದ ಅಧ್ಯಕ್ಷ ಗೌರೀಶ್, ಕಾನೂನು ಸಲಹೆಗಾರರಾದ ಡಾ.ಕೆ.ಪಿ.ವೆಂಕಟೇಶ್, ಮುಖಂಡರಾದ ಚಂದಾಪುರ ಶ್ರೀಧರ್, ಅತ್ತಿಬೆಲೆ ಆರ್.ಮಧು, ಅತ್ತಿಬೆಲೆ ಆರ್.ಸತೀಶ್ ರಾಜ್, ಆನೇಕಲ್ ಬಸವರಾಜ್, ಪರ್ವತಯ್ಯ, ಗೋವಿಂದರಾಜು, ಮಡಿವಾಳ ಅಂಬರೀಶ್, ಮಧು, ಅತ್ತಿಬೆಲೆ ಜಾವೀದ್ ಇದ್ದರು.