ಗೋಣಿಕೊಪ್ಪ: ಪತ್ತೂಟ್ ಆಚರಣೆಯೊಂದಿಗೆ ಇಪ್ಪತ್ತು ದಿನಗಳ ಪಯ್ಯವೂರ್ ಹಬ್ಬ ಸಂಪನ್ನಗೊಂಡಿದೆ.
ಕಡಿಯತ್ತೂರ್ ನಾಡ್ಗೆ ಸೇರಿರುವ ಅರಪಟ್ಟ್, ಕರಡ, ಪಾಲಂಗಾಲ, ಚೇಲಾವರ, ಪಾರಣೆ, ನಾಪೋಕ್ಲು ಭಾಗದ ಭಕ್ತರು ಸೇರಿ ಹಬ್ಬ ಆಚರಿಸಿದರು. ಆನೆ ಮೇಲೆ ದೇವರ ಮೂರ್ತಿ ಇರಿಸಿ ಪ್ರದಕ್ಷಿಣೆ ಮಾಡಿಸಲಾಯಿತು. ಮಲೆತಿರಿಕೆ ಈಶ್ವರ, ಪಟ್ರಪಂಡ ಕುಟುಂಬದ ಗುರುಕಾರೊಣ, ಮುಂಡಿಯೋಳಂಡ ಗುರುಕಾರೊಣ, ಬೈದೇಸಿ, ಗ್ರಾಮಗಳ ಭದ್ರಕಳಿ, ಚಾವುಂಡಿ, ಭಗವತಿ ದೇವರುಗಳ ದರ್ಶನವಾಯಿತು. ಸುಮಾರು 8 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.
20 ದಿನಗಳ ಆಚರಣೆ: ಫೆ.11ರಂದು ನೈವಿಧ್ಯದ ಅಕ್ಕಿ ಅರ್ಪಣೆಯ ಪದ್ಧತಿ ಮೂಲಕ ಒರ್ ಊಟ್ ಆಚರಣೆಗೆ ಚಾಲನೆ ನೀಡಲಾಗಿತ್ತು. ತಕ್ಕನ ಸ್ಥಾನದಲ್ಲಿರುವ ಮುಂಡಿಯೋಳಂಡ ಮತ್ತು ಬೊವ್ವೇರಿಯಂಡ ಕುಟುಂಬಸ್ಥರು ಫೆ. 10ರಂದು ಎತ್ತುಗಳ (ಎತ್ತ್ಪೋರಾಟ) ಸಹಕಾರದಲ್ಲಿ ಕಾಲ್ನಡಿಗೆಯಲ್ಲಿ ಅಕ್ಕಿ ಹೊತ್ತು ತಂದಿದ್ದರು. ನಂತರ ನಾಡ್ ಎತ್ತ್ ಪೋರಾಟ, ಎಟ್ಟೂಟ್, ಒಯಿಂಬದೂಟ್, ಪತ್ತೂಟ್ ಆಚರಣೆ ನಡೆಯಿತು.
ಹಿನ್ನೆಲೆ: ಹಿಂದೊಮ್ಮೆ, ದೈವಶಕ್ತಿಯೊಂದು ಚೆಯ್ಯಂಡಾಣೆ ಗ್ರಾಮದ ದೇವತೊಪ್ಪು ಮಂದ್ನಲ್ಲಿ ಪಯ್ಯವೂರ್ ನಮ್ಮೆಗೆ ಅಕ್ಕಿ ತಂದು ಹಬ್ಬ ಆಚರಿಸಲು ಕೇಳಿಕೊಳ್ಳುತ್ತದೆ. ಇದರಂತೆ ಮುಂಡಿಯೋಳಂಡ ಮತ್ತು ಬೊವ್ವೇರಿಯಂಡ ಕುಟುಂಬ ನೈವಿಧ್ಯಕ್ಕೆ ಅಕ್ಕಿ ಹಾಗೂ ನಾಡ್ ಎತ್ತ್ ಪೋರಾಟದ ಮೂಲಕ ಆಚರಣೆಯಲ್ಲಿ ತೊಡಗಿಕೊಳ್ಳುವ ಪದ್ಧತಿ ಇದೆ. ಸುಮಾರು 60 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ಹಬ್ಬ ಆಚರಿಸಲಾಗುತ್ತದೆ.