More

    ನಿಮ್ಮಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ -ಬಿಎಸ್ ವೈ ತೇಜೋವಧೆ ಸಹಿಸಲ್ಲ – ಸೋಮಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

    ದಾವಣಗೆರೆ: ಮಾಜಿ ಸಚಿವ ವಿ.ಸೋಮಣ್ಣ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಯಡಿಯೂರಪ್ಪ ವಿರುದ್ಧ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆದಿದ್ದಾರೆ.
    ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ನೀವು ಕಾಂಗ್ರೆಸ್‌ನಿಂದ ಬಂದವರು. ನಿಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ನೀವು ಸೋತಾಗಲೂ ಯಡಿಯೂರಪ್ಪನವರು ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಿದ್ದೇ ತಪ್ಪಾ? ಎಂದು ಪ್ರಶ್ನಿಸಿದರು.
    ಕಾಂಗ್ರೆಸ್‌ನಿಂದ ಬಂದ ನೀವು ಸಚಿವರಾದಿರಿ. ಆಗ ನಮಗೇನು ಸಾಮರ್ಥ್ಯ ಇರಲಿಲ್ಲವಾ? ಆಗ ಅನ್ಯಾಯವಾಗಿದ್ದು ನಮಗೆ, ನಿಮಗಲ್ಲ. ನಿರಂತರವಾಗಿ ಅಧಿಕಾರ ಅನುಭವಿಸಿ ಈಗ ಬಿಎಸ್‌ವೈ ವಿರುದ್ಧ ಮಾತನಾಡುತ್ತೀರಾ. ಕೀಳು ಮಟ್ಟದ ಭಾಷೆ ಬಳಸುತ್ತೀರಾ ಎಂದು ಕಿಡಿ ಕಾರಿದರು.
    ಯಡಿಯೂರಪ್ಪ ರೆಡಿಮೇಡ್ ಫುಡ್ ಅಲ್ಲ. 2008ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವರು ಕಾರಣ. ಈಶ್ವರಪ್ಪ, ಅನಂತಕುಮಾರ್ ಮೊದಲಾದ ನಾಯಕರ ಶ್ರಮವಿದೆ. ಸೋಮಣ್ಣ ಸಿದ್ಧಗಂಗಾ ಮಠದಲ್ಲಿ ಟೀಕಿಸುವ ಅಗತ್ಯವಿರಲಿಲ್ಲ. ಅವರು ದೆಹಲಿಗೆ ಹೋಗಿ ಅದೇನು ಚಾಡಿ ಹೇಳುತ್ತಾರೋ ಹೇಳಲಿ. ನಾವೂ ದೆಹಲಿಗೆ ಹೋಗುತ್ತೇವೆ ಎಂದು ಹೇಳಿದರು.
    ವಿಜಯೇಂದ್ರ ಅವರು ಪಕ್ಷವನ್ನು ಕಟ್ಟಲಿಲ್ಲವೇ? ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದನ್ನು ಟೀಕಿಸುವ ಮೂಲಕ ಈ ತೀರ್ಮಾನ ಕೈಗೊಂಡ ವರಿಷ್ಠರನ್ನೇಕೆ ಅವಮಾನಿಸುತ್ತಿದ್ದೀರಿ? ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿದರು.
    ಕಾಂತರಾಜ್ ವರದಿ ಬಗ್ಗೆ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಆಕ್ಷೇಪಿಸಿದ್ದಾರೆ. ಗಾಜಿನ ಮನೆಯಲ್ಲಿ ಕೂತು ವರದಿ ರಚಿಸಲಾಗಿದೆ. ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಎಲ್ಲ ಸಮಾಜದಲ್ಲೂ ಬಡವರು, ಹಿಂದುಳಿದವರಿದ್ದಾರೆ. ಹೀಗಾಗಿ ಮನೆ ಮನೆಗೆ ತೆರಳಿ ಸರ್ವೇ ನಡೆಸಲಿ ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts