ರಟ್ಟಿಹಳ್ಳಿ: ತಾಲೂಕಿನ ನಾಗವಂದ ಗ್ರಾಮದ ಅರಣ್ಯ ವ್ಯಾಪ್ತಿಯ ಶಿಕಾರಿಪುರ ತಾಲೂಕಿನ ಕಾಗಿನೆಲ್ಲೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ಚಿರತೆ ಕಾಣಿಸಿಕೊಂಡಿದೆ.
ಕಾಗಿನೆಲ್ಲೆ ರಸ್ತೆಯಲ್ಲಿ ತೆರಳುತ್ತಿದ್ದ ವಾಹನವೊಂದರ ಪ್ರಯಾಣಿಕರು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮೂರು ದಿನಗಳ ಹಿಂದೆ ಗ್ರಾಮದ ಮಕಬುಲ್ಸಾಬ್ ಮಾದಪುರ ಎಂಬುವವರ ಮನೆ ಹತ್ತಿರ ಕಟ್ಟಿದ್ದ 3 ವರ್ಷದ ಗರ್ಭಾವಸ್ಥೆಯಲ್ಲಿದ್ದ ಆಡು ಹಾಗೂ ವಾರದ ಹಿಂದೆ ಗ್ರಾಮದ ತೋಟದಲ್ಲಿದ್ದ ಕರುವನ್ನು ಚಿರತೆ ಬಲಿ ಪಡೆದಿದೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ಚಿರತೆ ದಾಳಿಯನ್ನು ಖಚಿತಪಡಿಸಿದ್ದಾರೆ.
ಬೋನು ಅಳವಡಿಸಲು ಆಗ್ರಹ: ಕಳೆದ ಒಂದು ವಾರದಲ್ಲಿ 2-3 ಬಾರಿ ಚಿರತೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಜಮೀನಿಗೆ ತೆರಳಿ ಬೆಳೆಗಳಿಗೆ ನೀರು ಹಾಯಿಸಲು ರೈತರು ಹಿಂಜರಿಯುತ್ತಿದ್ದಾರೆ. ಕೂಲಿ ಕಾರ್ವಿುಕರೂ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಚಿರತೆ ಸೆರೆ ಹಿಡಿಯಲು ಕೂಡಲೆ ಅರಣ್ಯಾಧಿಕಾರಿಗಳು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಗವಂದ ಸಮೀಪ ಚಿರತೆ ಪ್ರತ್ಯಕ್ಷವಾಗಿರುವ ವಿಷಯವನ್ನು ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಚಿರತೆ ದಾಳಿಗೆ ಆಡು ಬಲಿಯಾಗಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು.
| ಎಸ್.ಜಿ. ಅಗಡಿ, ಮಾಸೂರು ಉಪವಲಯ ಅರಣ್ಯಾಧಿಕಾರಿ