ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ನಡಿಮನೆ ಕಿರು ಸೇತುವೆ ಅಪಾಯದಲ್ಲಿದ್ದು, ಜನತೆ ಓಡಾಡುವುದಕ್ಕೂ ಆತಂಕ ಎದುರಾಗಿದೆ.
ನಡಿಮನೆ, ಅಂಬೇಗಾರ, ಕ್ಯಾತನಮನೆ, ಕೊಂಡಲಗಿ, ಹುಲ್ಲುಜಡ್ಡಿ ಮತ್ತಿತರ ಗ್ರಾಮೀಣ ಪ್ರದೇಶದ 150ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ನೀಡುವುದರೊಂದಿಗೆ ಅಮ್ಮೇನಳ್ಳಿ-ಹೆಗ್ಗರಣಿ ಲಿಂಕ್ ರಸ್ತೆಗೆ ಈ ಕಿರುಸೇತುವೆಯಿಂದ ಅನುಕೂಲವಾಗಿದೆ.
ಮಳೆಗಾಲದಲ್ಲಿ ಈ ಹಳ್ಳ ತುಂಬಿ ಹರಿಯುವುದರಿಂದ ಸೇತುವೆಯ ಒಂದು ಭಾಗದಲ್ಲಿ ಕಟ್ಟಿರುವ ಪಿಚ್ಚಿಂಗ್ ಕೂಡ ತನ್ನ ಅಸ್ತಿತ್ವ ಕಳೆದುಕೊಳ್ಳಲಾರಂಭಿಸಿದೆ. ಮಳೆಯಿಂದಾಗಿ ಕಳೆದ ವಾರ ಸೇತುವೆಯ ಮೇಲೆ ನೀರು ತುಂಬಿ ಹರಿದ ಪರಿಣಾಮ ಸೇತುವೆಯ ಎರಡೂ ಕಡೆ ಇರುವ ಕಂಬ ಹಾಗೂ ಹಿಡಿಕೆಗಳು ನೀರು ಪಾಲಾಗಿರುವುದರಿಂದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.
ಈ ಸೇತುವೆಯ ಮೇಲೆ, ದ್ವಿಚಕ್ರವಾಹನ, ಕಾರು, ರಿಕ್ಷಾ ಬಿಟ್ಟರೆ ಇನ್ನುಳಿದ ಯಾವುದೇ ವಾಹನ ಸಂಚರಿಸುವುದಕ್ಕೆ ಆಗುತ್ತಿಲ್ಲ ಆದ್ದರಿಂದ ಇಲ್ಲಿ ಶಾಶ್ವತವಾದ ದೊಡ್ಡ ಸೇತುವೆ ಅವಶ್ಯಕತೆ ಇದ್ದು ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
ಮಿನಿ ಸೇತುವೆ ಸುಮಾರು 50 ಅಡಿಗಿಂತಲೂ ಹೆಚ್ಚು ಉದ್ದವಿದೆ. ಸೇತುವೆ ಶಿಥಿಲಗೊಳ್ಳುತ್ತಿರುವುದರಿಂದ ಸಂಚಾರಕ್ಕೂ ಆತಂಕ ಉಂಟಾಗಿದೆ. ಈ ಭಾಗದ ಜನತೆಗೆ ಈ ಸೇತುವೆ ಬಹಳ ಮುಖ್ಯವಾಗಿರುವುದರಿಂದ ಇದನ್ನು ದುರಸ್ತಿ ಮಾಡುವ ಬದಲು ಇಲ್ಲಿಯೇ ದೊಡ್ಡ ಸೇತುವೆ ನಿರ್ವಿುಸುವುದು ಉತ್ತಮ. ಇದರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. | ಮಂಜುನಾಥ ಹೆಗಡೆ ಕ್ಯಾತನಮನೆ
15 ವರ್ಷದ ಹಿಂದೆ ತಾತ್ಕಾಲಿಕವಾಗಿ ಕಿರು ಸೇತುವೆ ನಿರ್ವಣವಾಗಿತ್ತು. ಸಾರ್ವಜನಿಕರ ಸಂಕಷ್ಟ ಗಮನಕ್ಕೆ ಇದ್ದು, ಸಂಚಾರಕ್ಕೆ ತೊಂದರೆ ಆಗದಂತೆ ಮಾಡಲಾಗುವುದು. ಇಲ್ಲಿ ಹೊಸ ಸೇತುವೆ ನಿರ್ವಿುಸಲು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮಂಜೂರಿಗಾಗಿ ಕಾಯಲಾಗುತ್ತಿದೆ. | ಎಂ.ಜಿ. ಹೆಗಡೆ ಗೆಜ್ಜೆ ಕಿಬ್ಬಳ್ಳಿ ಜಿಪಂ ಸದಸ್ಯರು ಅಣಲೇಬೈಲ್