ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಪುಷ್ಪಗಿರಿ ಬೆಟ್ಟದಲ್ಲಿ ಹುಟ್ಟುವ ಕುಮಾರಧಾರ ನದಿ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಲ್ಲಳ್ಳಿಜಲಪಾತ ಭೋರ್ಗರೆಯುತ್ತಿದೆ. ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡು ಲಗ್ಗೆ ಇಡುತ್ತಿದ್ದು, ಭಾನುವಾರ ಸಂಜೆ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿ ಹೊಳೆ ಉಕ್ಕಿ ಹರಿದ ಪರಿಣಾಮ ಸೇತುವೆ ಮೇಲೆ ನೀರು ನಿಂತಿತ್ತು. ಜಲಪಾತಕ್ಕೆ ತೆರಳಿದ ಪ್ರವಾಸಿಗರು ಹಿಂದಿರುಗಲು ಸಾಧ್ಯವಾಗದೆ ಸ್ವಲ್ಪ ಸಮಯ ಪರದಾಡಿದರು.
ವಿಷಯ ತಿಳಿದ ಸ್ಥಳಕ್ಕೆ ಬಂದ ಎನ್ಡಿಆರ್ಎಫ್ ತಂಡ ಹಗ್ಗದ ಸಹಾಯದಿಂದ ಸೇತುವೆಯ ಮತ್ತೊಂದು ಕಡೆ ಅಸಹಾಯಕರಾಗಿದ್ದವರನ್ನು ಕರೆತಂದಿತು. ನೀರು ಕಡಿಮೆಯಾದ ಮೇಲೆ ವಾಹನಗಳು ಸೇತುವೆ ದಾಟಲು ವ್ಯವಸ್ಥೆ ಮಾಡಲಾಯಿತು.
ಸುಂಟಿಕೊಪ್ಪದಿಂದ ಮಲ್ಲಳ್ಳಿ ಜಲಪಾತದ ವೀಕ್ಷಣೆಗಾಗಿ ಗೆಳೆಯರೊಂದಿಗೆ ತೆರಳಿದ್ದ ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿ, ಉದ್ಯಮಿ ಭಾಸ್ಕರ್ ಸೇತುವೆ ದಾಟಲು ಪರದಾಡಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.