ಹೊಸಕೋಟೆ: ಈ ನಾಡಿನಲ್ಲಿ ಶ್ರೀ ಶಂಕರಾಚಾರ್ಯರು ಜನ್ಮತಾಳದ್ದಿದ್ದರೆ ಸನಾತನ ಹಿಂದು ಧರ್ಮದ ಉಳಿವು ಅಸಾಧ್ಯವಾಗುತ್ತಿತ್ತು ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕೋಟೆಯಲ್ಲಿರುವ ಶ್ರೀ ಶಾರದಾದೇವಿ ದೇವಾಲಯದಲ್ಲಿ ಶನಿವಾರ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಶದಲ್ಲಿ ಹಿಂದು ಧರ್ಮ ಸಂಕಷ್ಟದಲ್ಲಿದ್ದಾಗ ಅವತಾರವೆತ್ತಿದ ಶಂಕರಾಚಾರ್ಯರು ಎಲ್ಲ ಕಷ್ಟಕಾರ್ಪಣ್ಯ ಎದುರಿಸಿ ದೇಶದ ನಾಲ್ಕೂ ಮೂಲೆಗಳಲ್ಲಿ 4 ಪೀಠಗಳನ್ನು ಸ್ಥಾಪಿಸಿ ಹಿಂದು ಧರ್ಮವನ್ನು ಬೆಳೆಸಿ ಉಳಿಸುವ ಕೆಲಸ ಮಾಡಿದರು ಎಂದರು.
ದಕ್ಷಿಣದ ಶೃಂಗೇರಿಯಲ್ಲಿ ಶಾರದಾ ಪೀಠ ಸ್ಥಾಪಿಸಿ ಅಲ್ಲಿ ದುರ್ಗೆಯಾಗಿ, ಸರಸ್ವತಿಯಾಗಿ, ಮಹಾಲಕ್ಷ್ಮೀಯಾಗಿ ಶಾರದೆ ನೆಲೆಸಿದ್ದು, ಭಕ್ತರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥ ಸಿದ್ಧಿಸುತ್ತಿದ್ದಾಳೆ ಎಂದರು.
ಎಲ್ಲರೂ, ಎಲ್ಲ ಕಾಲದಲ್ಲಿಯೂ ಶೃಂಗೇರಿಗೆ ಬರಲು ಅಸಾಧ್ಯ ಎಂಬ ಕಾರಣಕ್ಕೆ ರಾಜ್ಯದಲ್ಲಿ ಹಲವಾರು ಕಡೆ ಶಾರದೆಯ ಮಂದಿರಗಳನ್ನು ಸ್ಥಾಪಿಸಲಾಗಿದೆ. ಎಲ್ಲರೂ ಶಂಕರಾಚಾರ್ಯರ ಸಂದೇಶಗಳನ್ನು ಪಾಲಿಸುವಂತಾಗಬೇಕು, ಶ್ರೀಗಳು ಯಾವುದೇ ಒಂದು ಪಂಗಡಕ್ಕಾಗಿ ಅಥವಾ ಯಾವುದೇ ಒಂದು ಗುಂಪಿನ ಜನರಿಗಾಗಿ ಸಂದೇಶಗಳನ್ನು ಸಾರಿಲ್ಲ. ಜನರು ತಮ್ಮಲ್ಲಿರುವ ಅಹಂಕಾರ, ಅಸೂಯೆ ಮನೋಭಾವ ತೊರೆದು ಸಮಾನ ಭಾವನೆಯಿಂದ ಬದುಕಬೇಕು ಎಂದು ಸಲಹೆ ನೀಡಿದರು.
ಸ್ವಾಮೀಜಿಗಳಿಗೆ ಸ್ವಾಗತ: ತಾಲೂಕಿನ ಭಕ್ತರು ಸ್ವಾಮೀಜಿ ಅವರನ್ನು ಭಕ್ತಿಭಾವದಿಂದ ಸ್ವಾಗತಿಸಿದರು, ಶಾಸಕ ಶರತ್ಬಚ್ಚೇಗೌಡ ಆಶೀರ್ವಾದ ಪಡೆದರು. ತಾಲೂಕಿಗೆ ಮೊದಲ ಬಾರಿಗೆ ಬಂದಿದ್ದ ಸ್ವಾಮೀಜಿಗಳನ್ನು ಕಾಣಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.