ಕೆ.ಎಂ.ದೊಡ್ಡಿ: ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಸಮಾಜ ಸೇವಕ ಕದಲೂರು ಉದಯ್ ಸಹೋದರ ಕದಲೂರು ರವಿ ಉಚಿತವಾಗಿ 21 ಬಸ್ ವ್ಯವಸ್ಥೆ ಕಲ್ಪಿಸಿ ಯಾತ್ರೆಗೆ ಚಾಲನೆ ನೀಡಿದರು.
ನಂತರ ಮಾತಾನಾಡಿ, ಸಮೀಪದ ಯಲಾದಹಳ್ಳಿ, ಭುಜಹಳ್ಳಿ, ಕಾಡುಕೊತ್ತನಹಳ್ಳಿ ಗ್ರಾಮದಿಂದ 20ಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದ್ದು, ದೇವರ ದರ್ಶನ ಪಡೆಯಲು ಅನುಕೂಲ ಮಾಡಲಾಗಿದೆ ಎಂದರು.
ಧಾರ್ಮಿಕ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆದರೆ ಮನಸ್ಸು ಹಗುರವಾಗಿ ಹೊಸ ಉತ್ಸಾಹದ ಚೈತನ್ಯ ಮೂಡುತ್ತದೆ. ಹೀಗಾಗಿ ಮದ್ದೂರು ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳ ಭಕ್ತಾಧಿಗಳಿಗೆ ಆಯಾಯ ಗ್ರಾಮದಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಯಾತ್ರೆಯ ವೇಳೆ ಜನ ಒಗ್ಗೂಡಿ ತಮ್ಮೆಲ್ಲ ದುಃಖ ದುಮ್ಮಾನಗಳನ್ನು ಮರೆತು ದೇವರ ದರ್ಶನ ಪಡೆಯುತ್ತಾರೆ ಎಂದರು.
ಈಗಾಗಲೇ 20 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡು ಬಂದಿದ್ದಾರೆ. ಇನ್ನೂ 10,000ಕ್ಕೂ ಹೆಚ್ಚು ಭಕ್ತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಹಂತ ಹಂತವಾಗಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮುಖಂಡರಾದ ಬೋರೇಗೌಡ, ದೇವರಾಜು, ಬಸವರಾಜು, ರವಿ, ಕೃಷ್ಣ, ಕುಮಾರ್, ರಾಜಶೇಖರ್, ಮಹೇಂದ್ರ, ಚಿಕ್ಕಣ್ಣ ಇತರರಿದ್ದರು.