ಬೇಲೂರು: ಶಿವರಾತ್ರಿ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಸಾವಿರಾರು ಭಕ್ತರಿಗೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಹಾಗೂ ಪುತ್ರ ಬಳ್ಳೂರು ಉಮೇಶ್ ಕುಟುಂಬದಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಷನ್ ಪದಾಧಿಕಾರಿಗಳು, ಧರ್ಮಸ್ಥಳಕ್ಕೆ ತೆರಳುವ ಭಕ್ತಾದಿಗಳಿಗೆ ಬಳ್ಳೂರು ಗ್ರಾಮದ ಬಸ್ ನಿಲ್ದಾಣ ಸಮೀಪ ಸ್ವತಃ ಸಾಲುಮರದ ತಿಮ್ಮಕ್ಕನವರೇ ಊಟ ಬಡಿಸಿದ್ದು ವಿಶೇಷವಾಗಿತ್ತು. ತಿಮ್ಮಕ್ಕನವರನ್ನು ಕಂಡು ಹರ್ಷ ವ್ಯಕ್ತಪಡಿಸಿದ ಪಾದಯಾತ್ರಿಗಳು ಸೆಲ್ಫಿ ಫೋಟೋ ತೆಗೆಸಿಕೊಂಡು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಬಳ್ಳೂರು ಉಮೇಶ್ ಮಾತನಾಡಿ, ಪ್ರತಿ ವರ್ಷ ಸಾಲು ಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಷನ್ನಿಂದ ಪಾದಯಾತ್ರಿಗಳಿಗೆ ಆತಿಥ್ಯ ನೀಡಲಾಗುತ್ತಿತ್ತು. ಅದರಂತೆ ಈ ಬಾರಿಯೂ ಕೂಡ ಶುಚಿ ರುಚಿಯಾದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಭಕ್ತರು ಸುಖಕರವಾಗಿ ಪ್ರಯಾಣ ಮುಗಿಸಲಿ ಎಂದರು. ಪ್ರಭಾವತಿ ನಾಗೇಶ್ ಹಾಗೂ ಉಮೇಶ್ ಕುಟುಂಬದವರಿದ್ದರು.