More

    ದೋಷ ಮುಕ್ತ ಮತದಾರರ ಪಟ್ಟಿ ಸಿದ್ದಪಡಿಸಿ

    ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆದಿದ್ದು, ದೋಷ ಮುಕ್ತ ಹಾಗೂ ಅರ್ಹ ಮತದಾರರು ಮತದಾನ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಮತದಾರರ ಪಟ್ಟಿ ವೀಕ್ಷಕರಾದ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಿಸೆಂಬರ 8 ವರೆಗೆ ಹಕ್ಕು ಮತ್ತು ಆಕ್ಷೇಪಗಳು ಸಲ್ಲಿಸಲು ಅವಕಾಶವಿದ್ದು, ಈ ವೇಳೆಯಲ್ಲಿ ಪ್ರತಿಯೊಬ್ಬ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿ ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯ ಕೈಗೊಂಡು ದೋಷ ಮುಕ್ತ ಹಾಗೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕ್ರಮವಹಿಸಲು ಸೂಚಿಸಿದರು. ಜಿಲ್ಲೆಯಲ್ಲಿ 4,09,492 ಕುಟುಂಬಗಳ ಪೈಕಿ ಈ ವರೆಗೆ 2,17,587 ಕುಟುಂಬಗಳ ಸಮೀಕ್ಷೆ ಮಾಡಲಾಗಿದ್ದು, ಪ್ರತಿಶತ 53.14% ಪ್ರಗತಿ ಸಾಧಿಸಲಾಗಿದೆ. ನಿಗಧಿತ ಅವಧಿಯಲ್ಲಿ 100% ಪ್ರಗತಿ ಸಾಧಿಸಲು ಕ್ರಮವಹಿಸಬೇಕು ಎಂದರು.
    ನವೆಂಬರ 9 ರಂದು ಕರುಡು ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಒಟ್ಟು 14,86,196 ಮತದಾರರಿದ್ದು,ಅದರಲ್ಲಿ 7,42,124 ಪುರುಷ ಮತ್ತು 7,44,072 ಮಹಿಳಾ ಮತದಾರರು ಇರುತ್ತಾರೆ. ಜನಗಣತಿ ಪ್ರಕಾರ 1000 ಪುರುಷರಿಗೆ 989 ಮಹಿಳೆಯರು ಇದ್ದಾರೆ. ಮತದಾರರಲ್ಲಿ 1000 ಪುರುಷ ಮತದಾರರಿಗೆ 1003 ಮಹಿಳಾ ಮತದಾರರು ಇದ್ದಾರೆ. ಜಿಲ್ಲೆಯ ಇಪಿ ರೇಶಿಯೋ 66.24% ಇದೆ. ಮತದಾರರ ಲಿಂಗಾನುಪಾತ ಹೆಚ್ಚಾಗಿರುವ ಮುಧೋಳ, ಬಾಗಲಕೋಟೆ ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ತಹಸೀಲದಾರರಿಗೆ ಹೆಚ್ಚಾಗಿ ಮಹಿಳಾ ಮತದಾರರ ಬಗ್ಗೆ ಪರಿಶೀಲಿಸಿ ಸೇರ್ಪಡೆ ಮಾಡಲು ಹಾಗೂ ಶೂನ್ಯ ಸೇರ್ಪಡೆ, ಶೂನ್ಯ ತೆಗೆದು ಹಾಕುವ ಅರ್ಜಿ ಸ್ವೀಕೃತಿ ಆಗದೆ ಇರುವ ಮತಗಟ್ಟೆಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ನೋಂದಣಿ ಬಗ್ಗೆ ತಹಸೀಲ್ದಾರರು ಕ್ರಮ ವಹಿಸಲು ಸೂಚಿಸಿದರು.
    ಯುವ ವಯಸ್ಸಿನ ಮತದಾರ ನೋಂದಣಿ ತೀರಾ ಕಡಿಮೆ ಆಗಿದ್ದು, ಲಿಂಗಾನುಪಾತದಲ್ಲಿ ವ್ಯತ್ಯಾಸವಿದೆ. ಅವುಗಳನ್ನು ಸರಿದೂಗಿಸುವ ಬಗ್ಗೆ ಹಾಗೂ ಪ್ರತಿ ಕಾಲೇಜು ಮಟ್ಟದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಖಚಿತಪಡಿಸಿಕೊಂಡು ವಿಎಚ್ ಆಪ್ ಮೂಲಕ ನೋಂದಣಿಗೆ ಕ್ರಮವಹಿಸಲು ಸೂಚಿಸಿದರು. ತಹಸೀಲ್ದಾರರು ಅಲೇಮಾರಿ, ದೇವದಾಸಿಯರ, ತೃತೀಯ ಲಿಂಗಿಗಳು, ಅಂಗವಿಕಲ ಮತದಾರರ ನೋಂದಣಿ ಕುರಿತು ಹೆಚ್ಚಾಗಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಮೂಲಕ ಕಡ್ಡಾಯವಾಗಿ ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸುವಂತಾಗಬೇಕು ಎಂದರು.
    ಅರ್ಹತಾ ದಿನಾಂಕ ಈಗ ಪ್ರತಿ ವರ್ಷ 1ನೇ ಜನೇವರಿ, 1ನೇ ಎಪ್ರಿಲ್, 1ನೇ ಜುಲೈ ಹಾಗೂ 1ನೇ ಅಕ್ಟೋಬರ್ ಇದ್ದು, ಆ ದಿನಾಂಕಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಿಳಿಸಿದರು. ನವೆಂಬರ 27 ರಂದು ಹುನಗುಂದ ತಾಲೂಕಿನ ಮತಗಟ್ಟೆಗಳಿಗೆ ಭೇಟಿ ನೀಡಿ, ಬಿಎಲ್‍ಓ ಗಳು ಮಾಡುತ್ತಿರುವ ಕಾರ್ಯದ ಪರಿಶೀಲನೆ ಮಾಡಲಾಗಿದೆ. ನವೆಂಬರ 28 ರಂದು ತಹಸೀಲ್ದಾರ ಕಾರ್ಯಾಲಯ ಬಾಗಲಕೋಟೆಯ ಚುನಾವಣೆ ವಿಭಾಗದ ಕಾರ್ಯವನ್ನು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದ್ದ ಪ್ರತಿ ಮತದಾರರ ಹೆಸರು ಸೇರ್ಪಡೆಯಾಗುವದನ್ನು ಖಚಿತಪಡಿಸಿಕೊಳ್ಳಲು ಮತ್ತು ಸರಿಯಾದ ದಾಖಲೆಗಳನ್ನು ಇಡಲು ಸೂಚಿಸಿದರು.

    ನವೆಂಬರ 9 ರಂದು ಪ್ರಸಿದ್ದಿ ಪಡಿಸಿದ ಕರುಡು ಮತದಾರರ ಪಟ್ಟಿಯ ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ನೀಡಿದ ಬಗ್ಗೆ ಪರಿಶೀಲಿಸಿದರು. ಎಲ್ಲ ಮತದಾರರ ನೋಂದಣಿ ಅಧಿಕಾರಿಗಳು ಮರಣ ಹೊಂದಿದ ಮತದಾರರನ್ನು ಗುರುತಿಸಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಕಡಿಮೆಗೊಳಿಸುವ ಬಗ್ಗೆ ನಿಯಮಾನುಸಾರ ಕ್ರಮವಹಿಸಲು ಹಾಗೂ ಪ್ರತಿ ಮನೆ ಮನೆಗೆ ತೆರಳಿ ಸಮೀಕ್ಷೆ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts