ಸಾಗರ: ಸಾಗರ ಅಗ್ರಹಾರದ ಮೂರು ದೇವಸ್ಥಾನಗಳಲ್ಲಿ ನಿನ್ನೆ ಸಂಜೆ ಹುಂಡಿ ಒಡೆದು ಹಣ ಲಪಟಾಯಿಸಿದ ಪ್ರಕರಣ ನಡೆದಿದೆ. ನವಾಯತ್ ಕಾಲೊನಿಯ ಮೀನು ವ್ಯಾಪಾರಿ ಅಬ್ದುಲ್ ಶಕೂರ್ ಅವರ ಮನೆಯಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ ನಡೆದಿದ್ದು ದೂರು ದಾಖಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಈ ಮೂರೂ ದೇವಾಲಯಗಳಲ್ಲಿ ಸುಮಾರು ಸಂಜೆ 7 ಗಂಟೆ ಸಂದರ್ಭದಲ್ಲಿ ಹುಂಡಿ ಒಡೆದು ಕಳ್ಳರು ಹಣ ಲಪಟಾಯಿಸಿದ್ದು ಸಂಕ್ರಾಂತಿ ಹಬ್ಬದಂದೇ ಕಳ್ಳತನ ನಡೆದಿರುವುದು ಅಚ್ಚರಿ ಮೂಡಿಸಿದೆ.
ಸಂಜೆಯ ವೇಳೆಗೆ ಶಕೂರ್ ಅವರು ಒಬ್ಬರೇ ಮನೆಯಲ್ಲಿದ್ದುದನ್ನು ಗಮನಿಸಿದ ಕಳ್ಳರು ಸಂಜೆ ನಮಾಜ್ಗಾಗಿ ಶಕೂರ್ ಅವರು ಮಸೀದಿಗೆ ತೆರಳಿದಾಗ ಮನೆಯಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಆಭರಣ ಮತ್ತು ಹಣ ಕದ್ದು ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಮಹಾಬಲೇಶ್ವರ, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಎರಡೂ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯೇಕ ದೂರುಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.