ಹೊಸದುರ್ಗ: ಪಟ್ಟಣದ ವಿನಾಯಕ ರಂಗಮಂದಿರದ ಶ್ರೀ ದುರ್ಗಾದೇವಿ ಮಂಟಪದಲ್ಲಿ ಅ.15ರಿಂದ 24 ರವರೆಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 6ನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ ಎಂದು ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ವಿನಾಯಕ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿನಾಯಕ ರಂಗಮಂದಿರದ ಆವರಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ವಿಶಾಲವಾದ ದುರ್ಗಾದೇವಿ ಮಂಟಪ ನಿರ್ಮಿಸಲಾಗಿದೆ ಎಂದರು.
ಆರನೇ ವರ್ಷದ ಅಂಗವಾಗಿ ಮಹಾ ಕಾಳಿ ಮಾತೆಯ ಅರಾಧನೆಯ ಸಂಕಲ್ಪದಿಂದ ಕಪ್ಪು ಮತ್ತು ತಾಮ್ರ ಬಣ್ಣದ ಸಂಯೋಜನೆಯಲ್ಲಿ ಮಂಟಪ ನಿರ್ಮಿಸಲಾಗಿದೆ. ಹೊನ್ನಾವಾರ ತಾಲೂಕಿನ ಕೆಕ್ಕೆರಾದ ಶಿಲ್ಪಿ ಜೆ.ಡಿ.ಭಟ್ ಅವರು ಏಳು ಅಡಿ ಎತ್ತರದ ಹಂಸ ಸಿಂಹಾಸನಾರೂಢಳಾಗಿರುವ ದುರ್ಗಾ ಪರಮೇಶ್ವರಿ ಅಮ್ಮನವರ ಮೂರ್ತಿಯನ್ನು ನಿರ್ಮಿಸಿದ್ದಾರೆ. ದಸರಾ ಮಹೋತ್ಸವದ ಶೇ.90ರಷ್ಟು ಸಿದ್ಧತಾ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಿದರು.
ಅ.15ರ ಭಾನುವಾರ ಬೆಳಗ್ಗೆ 10 ಗಂಟೆಗೆ ದುರ್ಗಾ ದೇವಿ ಮಂಟಪದಲ್ಲಿ ಅಮ್ಮನವರ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಕೃಷ್ಣಮೂರ್ತಿ ಘನಪಾಠಿ ನೇತೃತ್ವ ವಹಿಸಲಿದ್ದಾರೆ. ಪ್ರತಿ ದಿನ ಬೆಳಗ್ಗೆ ಅಭಿಷೇಕ, ಅಷ್ಠೋತ್ತರ, ಕುಂಕುಮಾರ್ಚನೆ, ಭಜನೆ, ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ಸಾಂಸ್ಕೃತಿಕ ವೇದಿಕೆಯಲ್ಲಿ ನಗೆ ನಾಟಕ, ನೃತ್ಯ ರೂಪಕ, ನೃತ್ಯೋತ್ಸವ, ಸುಗಮ ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಮಿತಿಯ ಇ.ವಿ.ಜಿತೇಂದ್ರ, ಭರತ್ ಪಟೇಲ್, ಎಸ್.ಕೆ.ಮಂಜುನಾಥ್, ಕೆ.ಆರ್.ಪ್ರವೀಣ್, ಪ್ರದೀಪ್, ನಾಗರಾಜ್, ಜೈರಾಜ್, ಆರ್.ಜಿ.ಪ್ರಸನ್ನ ಮತ್ತಿತರಿದ್ದರು.