ಬೆಳಗಾವಿ: ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಮೇಲೆ ನಡೆದ ಅಮಾನುಷ ಹಲ್ಲೆ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು. ರಾಜಸ್ಥಾನದ ಜಲೋರ ಜಿಲ್ಲೆಯ ಸುರಾಣ ಹಳ್ಳಿಯಲ್ಲಿ ದಲಿತ ವಿದ್ಯಾರ್ಥಿ ನೀರಿನ ಮಡಿಕೆ ಮುಟ್ಟಿದ್ದಕ್ಕೆ ಆ ಶಾಲೆ ಶಿಕ್ಷಕ ವಿದ್ಯಾರ್ಥಿಯನ್ನು ಅಮಾನವೀಯವಾಗಿ ಥಳಿಸಿದ್ದು, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಘಟನೆ ಮಾಸುವ ಮುನ್ನವೇ ಇನ್ನೊಬ್ಬ ದಲಿತ ಶಿಕ್ಷಕಿಯು ಕೊಟ್ಟಿರುವ ಸಾಲ ಕೇಳಿದಳೆಂಬ ವಿಷಯ ಮುಂದಿಟ್ಟುಕೊಂಡು ಅವಳನ್ನು ಜೀವಂತ ದಹನ ಮಾಡಿದ ಘಟನೆ ನಡೆದಿರುವುದು ಸರ್ಕಾರದ ದಲಿತ ವಿರೋಧಿ ಮನಸ್ಥಿತಿ ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಎಂ.ಜೈನಖಾನ, ನಾಗೇಶ ಸಾತೇರಿ, ಎಲ್.ಎಸ್.ನಾಯಕ, ನಾಗಪ್ಪ ಸಂಗೊಳ್ಳಿ, ಎಫ್.ಎಂ.ನದಾಫ್, ಮಂದಾ ನೇವಗಿ ಇತರಿದ್ದರು.