ಚಾಮರಾಜನಗರ : ಯಳಂದೂರು ಪಟ್ಟಣದ ಕುಂಬಾರ ಗುಂಡಿಯಲ್ಲಿರುವ ಪ್ರಸಿದ್ಧ ಹಜರತ್ ಖ್ವಾಜಾ ಮೆಹಬೂಬ್ ಸುಭಾನಿ-ಷಾ ಖಾದ್ರಿ ದರ್ಗಾದಲ್ಲಿ ಬುಧವಾರ ರಾತ್ರಿ ಉರುಸ್(ಗಂಧೋತ್ಸವ) ನಡೆಯಿತು.
ಇದಕ್ಕಾಗಿ ದರ್ಗಾವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ 6 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರನಾಮ ಹಾಡುವ ಫಕೀರರ ತಂಡ, ಡೊಳ್ಳು, ಬ್ಯಾಂಡ್ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು.
ರಾತ್ರಿ 8.45ಕ್ಕೆ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ದುವಾ ಸಲ್ಲಿಸಿದರು.
ಹರಕೆ ಹೊತ್ತು ಬರುವ ಅನೇಕ ಭಕ್ತರು ಇಲ್ಲಿನ ಗೋರಿಗೆ ಹೂವಿನ ಚಾದರ್ನ್ನು ಹೊದಿಸಿ ಗಂಧ ಹಚ್ಚಿ, ಗಂಧದಕಡ್ಡಿ, ಸಾಂಬ್ರಾಣಿಯನ್ನು ಹಾಕಿ ಇದರ ಪಕ್ಕದಲ್ಲಿರುವ ನಿಶಾನ್(ದೊಡ್ಡ ಧ್ವಜಸ್ತಂಭ) ಕ್ಕೆ ಪ್ರದಕ್ಷಿಣೆ ಹಾಕಿ ಭಕ್ತಿ ಮೆರೆದರು.