More

    ದರೋಡೆ ಗ್ಯಾಂಗ್‌ನ ಮತ್ತೊಬ್ಬನ ಸುಳಿವು  -ಮನೆಯ ಬಳಿ ಬೈಕ್‌ನಲ್ಲಿ ಸುತ್ತಾಡಿದ್ದರು! -ಕೃತ್ಯಕ್ಕೆ ನಿರ್ದೇಶನ-ಹೇಳಿಕೆ ಜಾಡಿನತ್ತ ತನಿಖೆ  

    ದಾವಣಗೆರೆ: ಕುಂದುವಾಡ ರಸ್ತೆಯ ಬಾಲಾಜಿ ಲೇಔಟ್‌ನ ಮನೆಯೊಂದರಲ್ಲಿ ಬುಧವಾರ ಹಾಡಹಗಲೇ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ಬ್ಲಾೃಕ್ ಗ್ಯಾಂಗ್‌ನವನು ಎಂದು ಹೇಳಿಕೊಂಡು ಮನೆಗೆ ನುಗ್ಗಿದ್ದ ದರೋಡೆಕೋರನ ಜತೆಗೆ ಮತ್ತೊಬ್ಬ ಸಹಚರನಿದ್ದ ಎಂಬ ವಿಚಾರ ಬಯ ಲಾಗಿದೆ. ಮನೆಯವರ ಚಲನವಲನ ಗಮನಿಸಿದ್ದ ಇಬ್ಬರೂ ದರೋಡೆಗೆ ಹೊಂಚು ಹಾಕಿದ್ದರು.
    ಕೃತ್ಯಕ್ಕೂ ಮುನ್ನ ರಸ್ತೆಯಲ್ಲಿ ಎರಡು ಸುತ್ತು ಬೈಕ್‌ನಲ್ಲಿ ಸುತ್ತಾಡಿದ್ದರು. ಇದೆಲ್ಲವೂ ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮತ್ತೊಬ್ಬ ಆಸಾಮಿ ಕೂಡ ಕಪ್ಪು ಬಣ್ಣದ ಟಿ ಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ಎಂದು ಮೂಲಗಳು ತಿಳಿಸಿವೆ.
    ಬುಧವಾರ ಮಧ್ಯಾಹ್ನ 1 ಗಂಟೆಗೆ ಮನೆಯೊಡತಿ ಯೋಗೇಶ್ವರಿ ಕಸ ಚೆಲ್ಲಲು ಹೊರಹೋಗಿದ್ದಾಗ ಒಳಗೆ ನುಗ್ಗಿದ ಒಬ್ಬ ದರೋಡೆಕೋರ, ಅಲ್ಲಿದ್ದ ಮಗು ಸಮರ್ಥನಿಗೂ ಹೊಡೆದು ಹೆದರಿಸಿದ್ದ. ತಾನೂ ಬೇರೆಡೆ ಅವಿತಿದ್ದ.
    ಸ್ವಲ್ಪ ಸಮಯದ ನಂತರದಲ್ಲಿ ಯೋಗೇಶ್ವರಿ ಅವರ ತಲೆ ಇತರೆ ಭಾಗಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದಕ್ಕೆ ಬಳಸಿದ್ದ ಕಲ್ಲನ್ನು ಕೂಡ ಹೊರಗಿನಿಂದಲೇ ತಂದಿದ್ದ ಎನ್ನಲಾಗಿದೆ. ಮನೆಯಲ್ಲಿದ್ದ ಹಣ ದೋಚಿ ಹೊರಹೋಗುವಾಗ ದರೋಡೆಕೋರ ನೀಡಿದ್ದ ಹೇಳಿಕೆ ಬಗ್ಗೆ ಪೊಲೀಸರು ವಿಭಿನ್ನ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ.
    ಯೋಗೇಶ್ವರಿ ಅವರ ಪತಿ ಶ್ರೀನಾಥ್ ಪತ್ರ ಬರಹಗಾರರಾಗಿದ್ದು, ಯಾರೊಂದಿಗೂ ವೈಷಮ್ಯ ಇರಲಿಲ್ಲ ಎಂಬುದು ಅವರ ಸ್ನೇಹಿತರು ಹೇಳುವ ಮಾತು. ಆದರೆ, ಬ್ಲಾೃಕ್‌ಗ್ಯಾಂಗ್ ಇರುವುದು ಹಾಗೂ ಕೃತ್ಯ ನಡೆಸಲು ದೊಡ್ಡವರ ನಿರ್ದೇಶನವಿತ್ತು ಎಂಬುದಾಗಿ ಯೋಗೇಶ್ವರಿ ಅವರ ಬಳಿ ದರೋಡೆಕೋರ ನೀಡಿದ್ದ ಹೇಳಿಕೆ ನಿಜವೇ ಅಥವಾ ಪ್ರಕರಣದ ಹಾದಿ ತಪ್ಪಿಸುವ ಹುನ್ನಾರವೇ ಎಂಬುದರ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

    ಎರಡು ತಂಡ ರಚನೆ
    ವಿದ್ಯಾನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಬೆರಳಚ್ಚು ತಜ್ಞರು ನಿನ್ನೆಯಷ್ಟೆ ಪರಿಶೀಲನೆ ನಡೆಸಿದ್ದರು. ಶ್ವಾನ ದಳ ಕೂಡ ಕುಂದುವಾಡ ಕೆರೆವರೆಗೂ ಹೋಗಿ ನಿಂತಿತ್ತು ಎಂದು ಮೂಲಗಳು ತಿಳಿಸಿವೆ.
    ಪ್ರಕರಣ ಸಂಬಂಧ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ರಚಿಸಲಾದ ಎರಡು ತಂಡಗಳೂ ಆರೋಪಿಗಳ ಶೋಧ ಕಾರ್ಯ ಮುಂದುವರಿಸಿವೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ಹೊಂದಿವೆ.

    ಅಪರಿಚಿತರ ಬಗ್ಗೆ ನಿಗಾ ವಹಿಸಿ: ಎಸ್ಪಿ
    ಮನೆಗಳಲ್ಲಿ ಒಂಟಿ ಮಹಿಳೆಯರಿದ್ದಲ್ಲಿ ಅಪರಿಚಿತರ ಬಗ್ಗೆ ಎಚ್ಚರ ವಹಿಸಬೇಕು. ಮಾತನಾಡುವ ಸೋಗಿನಲ್ಲಿ ಬಂದು ಮನೆಯೊಳಗೆ ನುಗ್ಗುವ, ಸರಗಳ್ಳತನ ಅಥವಾ ಹಣ ದೋಚುವ ಸಾಧ್ಯತೆ ಇದೆ ಎಚ್ಚರ ವಹಿಸಿ ಎಂದು ಎಸ್ಪಿ ಉಮಾ ಪ್ರಶಾಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಅರಿವು ಮೂಡಿಸಲಿದೆ. ಬೀಗ ಹಾಕಿದ ಮನೆಗಳಲ್ಲಿ ಹೆಚ್ಚು ಕಳ್ಳತನ ನಡೆಯುತ್ತಿದ್ದು, ಮನೆ ಮಾಲೀಕರು ಮನೆಯಿಂದ ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಬೀಟ್ ವ್ಯವಸ್ಥೆ ಮೂಲಕ ನಿಗಾ ವಹಿಸಲು ಅನುಕೂಲವಾಗಲಿದೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts