ರಾಯಬಾಗ: ತೋಳಗಳ ದಾಳಿಗೆ ಮರಿಗಳು ಸೇರಿ 25 ಕುರಿಗಳು ಬಲಿಯಾದ ಘಟನೆ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮಲ್ಲಪ್ಪ ಯಲ್ಲಪ್ಪ ಹಿರೇಕೋಡಿ ಎಂಬುವರಿಗೆ ಈ ಕುರಿಗಳು ಸೇರಿವೆ. ಕುರಿಗಳ ಹಿಂಡು ಬೊಮ್ಮನಾಳ ಗ್ರಾಮದ ರಬಕವಿ ತೋಟದಲ್ಲಿ ರೈತರ ಗದ್ದೆಯಲ್ಲಿ ತಂಗಿದ್ದವು. ತಡರಾತ್ರಿ ಏಕಾಏಕಿ ದಾಳಿ ಮಾಡಿರುವ ತೋಳಗಳು ಸುಮಾರು 25 ಕುರಿಗಳನ್ನು ಬಲಿ ಪಡೆದಿವೆ. ಬೆಲೆ ಬಾಳುವ ಕುರಿಗಳನ್ನು ಕಳೆದುಕೊಂಡು ಕುರಿಗಾಹಿ ಮಲ್ಲಪ್ಪ ಕಂಗಾಲಾಗಿದ್ದಾನೆ. ಶನಿವಾರ ವಿಷಯ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಸಂತೋಷ ಸುಂಬಳಿ ಮತ್ತು ಪಶು ಇಲಾಖೆ ಅಧಿಕಾರಿ ರಾಮು ರಾಠೋಡ, ಎಂ.ಬಿ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.