ಹುಬ್ಬಳ್ಳಿ: ನಗರದ ತೋಳನಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರು ವುದು ಮಂಗಳವಾರ ಬೆಳಕಿಗೆ ಬಂದಿದೆ. ತೋಳನಕೆರೆ ನೀರಿನಲ್ಲಿ ರಾಸಾಯನಿಕ ಪದಾರ್ಥಗಳ ಪ್ರಮಾಣ ನಿಗದಿಗಿಂತ ಹೆಚ್ಚಾಗಿ ಮೀನುಗಳು ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದ್ದು, ನೀರಿನ ಪರೀಕ್ಷೆಯ ನಂತರವೇ ಸತ್ಯಾಂಶ ಹೊರಬರಬೇಕಿದೆ.
ಅಮೃತ ಯೋಜನೆಯಡಿ ಕೆರೆ ಆವರಣದಲ್ಲಿ ನಿರ್ವಿುಸಿರುವ ನೀರು ಶುದ್ಧೀಕರಣ ಘಟಕ (ಎಸ್ಟಿಪಿ)ದಿಂದ ನೀರು ಪರೀಕ್ಷೆಗೊಳಪಡಿಸದೇ, ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಎಸ್ಟಿಪಿಯಿಂದ ಹೊರಬರುವ ನೀರಿನಲ್ಲಿ ಕೆಲ ರಾಸಾಯನಿಕ ಪ್ರಮಾಣಗಳು ನಿಗದಿಗಿಂತ ಹೆಚ್ಚಿದೆ. ತೋಳನಕೆರೆ ಆವರಣದ ಎಸ್ಟಿಪಿಯಲ್ಲಿ ಪ್ರಯೋಗಾಲಯವೇ ಇಲ್ಲ. ಹೀಗಾಗಿ, ನೀರು ಪರೀಕ್ಷೆ ಮಾಡುವ ಗೊಡವೆಗೆ ಯಾರೂ ಹೋಗುತ್ತಿಲ್ಲ. ನಿಯಮಗಳ ಪ್ರಕಾರ ಶುದ್ಧೀಕರಣಗೊಂಡ ನೀರನ್ನು ಕೆರೆಗೆ ಹರಿಸುವ ಮೊದಲು ಎಸ್ಟಿಪಿಯಲ್ಲಿ ನೀರಿನ ಪರೀಕ್ಷೆ ಆಗಬೇಕು. ಕಳೆದ ಮಾ. 22ರಂದು ಸ್ಮಾರ್ಟ್ಸಿಟಿ ಯೋಜನೆಯಡಿ ಕೆರೆಯ ನೀರು ಪರೀಕ್ಷಿಸಿದಾಗ ಫಾಸ್ಪರಸ್ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಕಳೆದ ಹಲವಾರು ವರ್ಷಗಳಿಂದ ಚರಂಡಿ ನೀರು ಕೆರೆಗೆ ಸೇರಿ, ನೀರಿನಲ್ಲಿ ನ್ಯೂಟ್ರಿಯನ್ಸ್ ಪ್ರಮಾಣವೂ ಹೆಚ್ಚಾಗಿರುವ ಸಾಧ್ಯತೆ ಇದೆ. ಅಲ್ಲದೆ, ತೋಳನಕೆರೆಗೆ ಒಳಚರಂಡಿ ನೀರು ಸೇರುವುದನ್ನು
ಸ್ಮಾರ್ಟ್ಸಿಟಿ ಯೋಜನೆಯಡಿ ತಡೆಯಲಾಗಿದೆ. ಆದರೆ, ತೆರೆದ ಚರಂಡಿ ನೀರು ಇಂದಿಗೂ ಕೆರೆ ಸೇರುತ್ತಿದೆ. ಇದರೊಂದಿಗೆ, ರೇಣುಕಾನಗರದ ನೀರು ಸಹ ತೋಳನಕೆರೆಗೆ ಸೇರುತ್ತಿದೆ. ಮೀನುಗಳ ಸಾವಿಗೆ ಕಾರಣ ಇರಬಹುದೆಂದು ಅಂದಾಜಿಸಲಾಗಿದೆ.
ಹರಿದು ಹೋಗದ ನೀರು: ತೋಳನಕೆರೆಯಲ್ಲಿ ಕಳೆದ ಮಳೆಗಾಲದ ನಂತರ ಸಂಗ್ರಹಗೊಂಡಿರುವ ಒಳಚರಂಡಿ ನೀರು ಹರಿದು ಹೋಗಿಲ್ಲ. ಕೆರೆಯಲ್ಲಿನ ನೀರನ್ನು ಹೊರಗೆ ಹಾಕಬೇಕು ಇಲ್ಲವೆ, ಮಳೆ ಹೆಚ್ಚಾಗಿ ಅಲ್ಲಿನ ನೀರು ತಾನಾಗಿಯೇ ಹೊರಗೆ ಹರಿದು ಹೋಗಬೇಕು. ಅಂದಾಗ ಕೆರೆಯಲ್ಲಿ ಸ್ವಚ್ಛ ನೀರು ಸಂಗ್ರಹಗೊಂಡು, ರಾಸಾಯನಿಕ ಪ್ರಮಾಣ ಕಡಿಮೆಯಾಗುತ್ತದೆ.
ಪ್ರಯೋಗಾಲಯಕ್ಕೆ: ತೋಳನಕೆರೆಯಲ್ಲಿ ಮೀನುಗಳು ಸಾವಿಗೀಡಾಗುತ್ತಿದ್ದಂತೆಯೇ ಹು-ಧಾ ಸ್ಮಾರ್ಟ್ಸಿಟಿ ಕಂಪನಿ ಅಧಿಕಾರಿಗಳು ಕೆರೆಯ ನೀರು ಸಂಗ್ರಹಿಸಿ, ಹುಬ್ಬಳ್ಳಿಯಲ್ಲಿಯೇ ಇರುವ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಒಂದೆರೆಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆ ಇದೆ.
ತೋಳನಕೆರೆ ನೀರನ್ನು ಕಳೆದ ಮಾ. 22ರಂದು ಪರೀಕ್ಷೆಗೆ ಒಳಪಡಿಸಿದ್ದೇವು. ಈಗ ಮತ್ತೆ ಅಲ್ಲಿನ ನೀರು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ್ದೇವೆ. ಕೆರೆಯ ನೀರು ಸ್ವಚ್ಛಗೊಳಿಸಬೇಕು. ಇಲ್ಲವೇ, ಮಳೆಯಿಂದ ಕೆರೆಯಲ್ಲಿನ ಈ ಮೊದಲಿನ ನೀರು ಹೊರಗೆ ಹೋಗಬೇಕು.
| ಎಸ್.ಎಚ್. ನರೇಗಲ್
ವಿಶೇಷ ಅಧಿಕಾರಿ, ಹು-ಧಾ ಸ್ಮಾರ್ಟ್ಸಿಟಿ ಕಂಪನಿ
ತೋಳನಕೆರೆ ನೀರನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುತ್ತೇವೆ. ಇದುವರೆಗೆ ರಾಸಾಯನಿಕ ಪ್ರಮಾಣ ಹೆಚ್ಚಿರುವ ಅಂಶ ಕಂಡುಬಂದಿಲ್ಲ.
| ಹೆಸರು ಹೇಳಲಿಚ್ಛಿಸದ ಜಲಮಂಡಳಿಯ ಸಹಾಯಕ ಇಂಜಿನಿಯರ್