ಮಂಗಳೂರು: ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಅಣೆಕಟ್ಟಿನ ನೀರಿನ ಮಟ್ಟ ಇನ್ನಷ್ಟು ಇಳಿಕೆಯಾಗಿದೆ. ತುಂಬೆಯಲ್ಲಿ ನೀರಿನ ಕೊರತೆಯಿದ್ದರೂ ಕುಡಿಯುವ ನೀರಿನ ಪೂರೈಕೆ ಉದ್ದೇಶದಿಂದ ಬುಧವರ ಗರಿಷ್ಠ 140 ಎಂಎಲ್ಡಿ ನೀರು ಮೇಲಕ್ಕೆತ್ತಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಮಂಗಳವಾರ ತುಂಬೆಯಲ್ಲಿ 3.62 ಮೀ. ನೀರಿನ ಸಂಗ್ರಹವಿತ್ತು. ಕಳೆದ ವರ್ಷ ಇದೇ ದಿನ 3.69 ಮೀ. ನೀರಿನ ಸಂಗ್ರಹ ದಾಖಲಾಗಿತ್ತು. ಈ ವಾರ ಉತ್ತಮ ಮಳೆಯಾದರೆ ನೀರಿನ ಸಂಗ್ರಹ ಏರಿಕೆಯಾಗುವ ನಿರೀಕ್ಷೆ ಇದೆ. ತುಂಬೆ ಡ್ಯಾಂ ನೀರಿನ ಕುಸಿತವನ್ನು ತಡೆಗಟ್ಟಲು ಹರೇಕಳ ಡ್ಯಾಂನಿಂದ ನೀರು ಪಂಪಿಂಗ್ ಮಾಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಬಿಳಿಯೂರು ಡ್ಯಾಂನಿಂದ ಎಎಂಆರ್ ಡ್ಯಾಂಗೆ ನೀರು ಬಿಡುಗಡೆಗೊಳಿಸಿದ್ದರೂ 15.91 ಮೀ. ಮಾತ್ರ ನೀರಿದೆ.
*ಕುಡಿಯುವ ನೀರಿನ ಸಮರ್ಪಕ ಪೂರೈಕೆ
ನಗರದಲ್ಲಿ ನೀರಿನ ರೇಷನಿಂಗ್ ಆರಂಭದಿಂದ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ನಡೆಯುತ್ತಿದೆ. ಮಂಗಳವಾರ ಪಣಂಬೂರು ಸ್ಥಾವರ ವ್ಯಾಪ್ತಿಯ ಸುರತ್ಕಲ್, ಎನ್ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲೊನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ. ಪಡೀಲ್ ಸ್ಥಾವರ: ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವನಗರ, ಅಳಪೆ, ಮೇಘನಗರ, ಮಂಜಳಿಕೆ, ಕಂಕನಾಡಿ ರೈಲು ನಿಲ್ದಾಣ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಗೂಡ್ಶೆಡ್, ದಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗರಕ್ಕೆ ನೀರಿನ ಪೂರೈಕೆಯಾಗಿದೆ.
*ಟ್ಯಾಂಕರ್ ಮೂಲಕ ನೀರು ಪೂರೈಕೆ
ಶಕ್ತಿನಗರ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ಮಂಗಳವಾರ ನೀರು ತಲುಪದ ಹಿನ್ನೆಲೆಯಲ್ಲಿ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರುಮಠ, ಪ್ರಶಾಂತ್ ನಗರದ ಹಲವಡೆ ಪಾಳಿಕೆಯಿಂದ ಟ್ಯಾಂಕರ್ ನೀರು ಪೂರೈಕೆಯಾಗಿದೆ. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಮೂಡ ಪಂಪ್ಹೌಸ್, ಕೊಟ್ಟಾರ ಚೌಕಿ ಪಂಪ್ಹೌಸ್, ಕೂಳೂರು ಪಂಪ್ಹೌಸ್, ಕಾಪಿಕಾಡ್, ದಡ್ಡಲಕಾಡ್, ಬಂಗ್ರಕೂಳೂರುವ್ಯಾಪ್ತಿಗೆ ನೀರು ಪೂರೈಕೆಯಾಗಿದೆ.
——————–
ಸಹಾಯವಾಣಿಗೆ ದೂರುಗಳ ಸರಮಾಲೆ
ಕಳೆದ 1 ವಾರದಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸಹಾಯವಾಣಿ ವಿಭಾಗಕ್ಕೆ ದೂರುಗಳ ಸರಮಾಲೆಯೇ ಬಂದಿದೆ. ಬಹುತೇಕ ದೂರುಗಳ ಪೈಕಿ ನೀರಿನ ಸಮಸ್ಯೆಯೇ ಅಧಿಕ. ನೀರಿನ ಸಮಸ್ಯೆ ಸೇರಿದಂತೆ ಎಲ್ಲಾ ಸಾರ್ವಜನಿಕ ದೂರುಗಳಿಗೆ 24 ಗಂಟೆಯ ಒಳಗಾಗಿ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಮಾತ್ರವಲ್ಲದೆ ನೀರಿನ ಸಮಸ್ಯೆ, ತುರ್ತು ಮಾಹಿತಿಗಾಗಿ ಪಡೀಲ್ ರೇಚಕ ಸ್ಥಾವರ-0824-2230840, ಬೆಂದೂರು ರೇಚಕ ಸ್ಥಾವರ – 0824-2220303, 2220362, ಪಣಂಬೂರು ರೇಚಕ ಸ್ಥಾವರ- 0824-2220364, ಮಂಗಳೂರು ಮಹಾನಗರಪಾಲಿಕೆ ವಾಟ್ಸಾಪ್ ಸಂಖ್ಯೆ-9449007722, ಮಂಗಳೂರು ಮಹಾನಗರಪಾಲಿಕೆ ಕಂಟ್ರೋಲ್ ರೂಮ್- 0824-2220319/2220306 ಸಂಪರ್ಕಿಸುವಂತೆ ಪಾಲಿಕೆ ತಿಳಿಸಿದೆ.