ವಿಜಯಪುರ: ಉತ್ತರ ಕರ್ನಾಟದ ಅತ್ಯಂತ ವಿಜೃಂಭಣೆಯ ಖ್ಯಾತಿ ಹೊತ್ತ ಇಂಡಿ ತಾಲೂಕಿನ ತಾಂಬಾದ ದಸರಾ ಉತ್ಸವ ದಿನೇ ದಿನೇ ಕಳೆಗಟ್ಟುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಉತ್ಸವದ ಹಿನ್ನೆಲೆ ಹಮ್ಮಿಕೊಂಡ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೋಡಲು ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳ ಮೆರಗು ಹೆಚ್ಚಿದ್ದು, ಸುತ್ತಲಿನ ಹಳ್ಳಿಗಳ ಜನರು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.
ಶುಕ್ರವಾರ ಉತ್ಸವ ಸಮಿತಿ ಅಧ್ಯಕ್ಷ ಶಾಸಕ ಡಾ.ದೇವಾನಂದ ಚವಾಣ್ ದಂಪತಿ ನವಚಂಡಿ ಹೋಮ ಮಾಡುವ ಮೂಲಕ ಭಕ್ತಿಯ ಪರಕಾಷ್ಟೆ ಮೆರೆದರು. ಬೆಳಗ್ಗೆಯಿಂದಲೇ ವಿವಿಧ ಪೂಜೆ-ಪುನಸ್ಕಾರದಲ್ಲಿ ತೊಡಗಿಸಿಕೊಂಡಿದ್ದ ಶಾಸಕರ ಕುಟುಂಬ ಬಳಿಕ ಹೋಮ -ಹವನ ನೆರವೇರಿಸುವ ಮೂಲಕ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಡಾ.ಸುನಿತಾ ಚವಾಣ್ ಮತ್ತು ಪುತ್ರ ಅಭಿನವ ಸಹ ಪಾಲ್ಗೊಂಡಿದ್ದರು.