ಸಿದ್ದಾಪುರ; ಸಿದ್ದಾಪುರ ಪಟ್ಟಣದಲ್ಲಿ ಲಾಕ್ಡೌನ್ಗೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇಲ್ಲಿಯಂತೆ ಎಲ್ಲೆಡೆ ಜನರು ಸ್ಪಂದಿಸಿದರೆ ಕರೊನಾ ವೈರಸ್ ಸಂಪೂರ್ಣ ನಾಶವಾಗಲಿದೆ ಎಂದು ಶಿರಸಿ ಡಿವೈಎಸ್ಪಿ ಜಿ.ಟಿ. ನಾಯಕ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಡ್ರೋಣ್ ಕ್ಯಾಮರಾ ಮೂಲಕ ಲಾಕ್ಡೌನ್ ಪರಿವೀಕ್ಷಣೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದಾಪುರದಲ್ಲಿ ಪೊಲೀಸ್, ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಹಾಗೂ ಜನತೆ ಕರೊನಾ ವೈರಸ್ ತಡೆಯಬೇಕು ಎಂಬ ಇಚ್ಛೆ ಹೊಂದಿದ್ದರಿಂದ ಜನರ ಸಂಚಾರ ಕಡಿಮೆ ಇದೆ. ಅವಶ್ಯ ಇರುವವರು ಮಾತ್ರ ಓಡಾಡಬೇಕು. ಅನವಶ್ಯವಾಗಿ ಓಡಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಟ್ಟಣದ ಸುತ್ತಲಿನ 6 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮರಾ ಮೂಲಕ 20 ನಿಮಿಷ ಪರಿವೀಕ್ಷಣೆ ಮಾಡಲಾಗಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಈ ಪ್ರಕ್ರಿಯೆ ನಡೆಯಲಿದೆ. ಮುಂಡಗೋಡ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ನನ್ನ ವ್ಯಾಪ್ತಿಗೆ ಬರುತ್ತಿದ್ದು, ಇದರಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಲಾಕ್ಡೌನಗೆ ಉತ್ತಮ ಸ್ಪಂದನೆ ಇರುವುದು ಕಂಡುಬರುತ್ತಿದೆ. ಇದೇ ರೀತಿ ಸರ್ಕಾರ ಮುಂದಿನ ಆದೇಶ ನೀಡುವವರೆಗೂ ಜನತೆ ಮನೆಯಿಂದ ಹೊರಗೆ ಬರಬಾರದು ಎಂದರು. ಈ ವೇಳೆ ಸಿಪಿಐ ಪ್ರಕಾಶ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಇದಕ್ಕೂ ಪೂರ್ವದಲ್ಲಿ ತಾಲೂಕಿನ ಕಾನಸೂರಿನಲ್ಲಿಯೂ ಡ್ರೋಣ್ ಕ್ಯಾಮರಾ ಮೂಲಕ 6 ಕಿ.ಮೀ. ಸುತ್ತಳತೆಯಲ್ಲಿ ಜಿ.ಟಿ. ನಾಯಕ ಅವರು ಪರಿವೀಕ್ಷಣೆ ನಡೆಸಿದರು.