ಧಾರವಾಡ: ನಗರದ ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ನಲ್ಲಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಪಾಲಕರು ಗ್ರಾಮೀಣ ಸೊಗಡಿನ ವೇಷಭೂಷಣದಲ್ಲಿ ಹಬ್ಬದಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಎಂದರೆ ಮಕ್ಕಳು ಎತ್ತಿನ ಚಕ್ಕಡಿಯಲ್ಲಿ ಶಾಲೆಗೆ ಆಗಮಿಸಿ ಆವರಣದಲ್ಲಿ ಸುತ್ತು ಹಾಕಿ ಸಂಭ್ರಮಿಸಿದರು. ಇನ್ನು ಕೆಲ ಮಕ್ಕಳು ಕೇರಳದ ಸಂಪ್ರದಾಯದಂತೆ ಓಣಂ ಆಚರಿಸಿದರು.
ಜೋಳ, ಗೋವಿನಜೋಳದ ಕಾಳಿನ ರಾಶಿಪೂಜೆ ಮಾಡುವ ಮೂಲಕ ರೈತರು ಒಕ್ಕಣೆ ಮಾಡುವ ವಾತಾವರಣ ಸೃಷ್ಟಿಯಾಗಿತ್ತು. ನಂತರ ತಾವು ತಂದಿದ್ದ ಸಜ್ಜೆ ರೊಟ್ಟಿ ಸಮೇತ ಹಬ್ಬದ ಊಟ ಸವಿದರು. ಪರಸ್ಪರ ಎಳ್ಳು- ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ಸಂಭ್ರಮ ನಾಳೆ
ಹುಬ್ಬಳ್ಳಿ: ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗೋಕುಲ ರಸ್ತೆಯ ಯಾತ್ರಿ ಗಾರ್ಡನ್ನಲ್ಲಿ ಜ. 15ರಂದು ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ‘ಸಂಕ್ರಾಂತಿ ಸಂಭ್ರಮ’ ಏರ್ಪಾಟಾಗಿದೆ. ಸಮಾಜದ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪ್ರದರ್ಶನ (25 ಮಕ್ಕಳು), ಕನ್ನಡ ಕೋಗಿಲೆ ಖ್ಯಾತಿಯ ಅರ್ಜುನ ಇಟಗಿ, ಶ್ರೀಧರ ಹಿರೇಮಠ ಅವರಿಂದ ಸಂಗೀತ, ಸಂಕ್ರಾಂತಿ ಹಬ್ಬದ ವಿಶೇಷ ಊಟ, ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಗ್ರಾಮೀಣ ಕ್ರೀಡೆ, ಪ್ರಶಸ್ತಿ ವಿತರಣೆ, ಎಳ್ಳು ಬೆಲ್ಲ ವಿತರಣೆ ಹಾಗೂ ಲಘು ಉಪಾಹಾರ, ಪುರುಷರು ಜುಬ್ಬ, ಲುಂಗಿ/ ಧೋತ್ರ, ಶೆಟ್ಟರ್ ಟೋಪಿ, ಮಹಿಳೆಯರು ಇಳಕಲ್ ಸೀರೆ ಧರಿಸಿ ಆಗಮಿಸಬೇಕು. ಮಾಹಿತಿಗೆ ಮೊ.ಸಂ. 9448094038, 9448274278ಗೆ ಸಂಪರ್ಕಿಸಬಹುದು ಎಂದು ಅಧ್ಯಕ್ಷ ಆನಂದ ಉಪ್ಪಿನ ತಿಳಿಸಿದ್ದಾರೆ.