ಗಜೇಂದ್ರಗಡ: ಪ್ರತಿಯೊಬ್ಬರ ಮನೆ ಮನೆಗೂ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಮನೆಮನೆಗೂ ಗಂಗೆ (ಜಲಜೀವನ ಮಿಷನ್) ಎಂಬ ಯೋಜನೆ ಜಾರಿಗೆ ತಂದಿದ್ದು, ಎಲ್ಲರೂ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಜತೆಗೆ ಜೀವಜಲವನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 36.85 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸರ್ಕಾರಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕಾದರೆ, ಗ್ರಾಮಸ್ಥರು ಕಾಮಗಾರಿಯನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಗ್ರಾಪಂ ಸದಸ್ಯರಾದ ಬಾಳಾಜಿ ಭೋಸ್ಲೆ, ಯಲ್ಲವ್ವ ಮುಶಿಗೇರಿ, ಮುತ್ತು ಕಡಗದ, ಅಶೋಕ ವನ್ನಾಲ, ಭಾಸ್ಕರಸಾ ರಾಯಬಾಗಿ, ಮಂಜುನಾಥ ನೆಲವಡಿ, ಮಲ್ಲಪ್ಪ ಗೂಳಿ, ಅಶೋಕ ಮಾದರ, ಸುಭಾಸ ಹಡಪದ, ಬಸವರಾಜ ನೀಲಗುಂದ, ರಾಮಪ್ಪ ಹರಿಜನ, ಕಳಕಪ್ಪ ಮುಶಿಗೇರಿ, ಕಳಕಪ್ಪ ಕಳಕಾಪೂರ, ಜಗದೀಶ ಹಂಚಾಟೆ ಇತರರಿದ್ದರು.