ಚಿತ್ರದುರ್ಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಮಟ್ಟ ಹಾಕಲು ದಾವಣಗೆರೆ ಪೂರ್ವವಲಯ ಡಿಐಜಿ ಡಾ.ಕೆ.ತ್ಯಾಗರಾಜನ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಎಆರ್ ಮೈದಾನದಲ್ಲಿ ಶುಕ್ರವಾರ ವಾರ್ಷಿಕ ಪೊಲೀಸ್ ಪರೇಡ್ ವೀಕ್ಷಣೆ ಬಳಿಕ ಪೊಲೀಸ್ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉದಾಸೀನ ತೋರದೆ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ತಾಕೀತು ಮಾಡಿದರು.
ಜೂಜು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಗಾಂಜಾ ಸೇರಿ ಮಾದಕ ವಸ್ತುಗಳ ಮಾರಾಟ ನಿಯಂತ್ರಿಸಲು, ಅಪರಾಧ ಪ್ರಕರಣಗಳ ತನಿಖೆ ಚುರುಕುಗೊಳಿಸಲು, ಸಿಬ್ಬಂದಿ ಗಸ್ತು ಬಿಗಿಗೊಳಿಸಲು ಸೂಚಿಸಿದರು.
ಜನರ ಜತೆ ಸೌಜನ್ಯದಿಂದ ವರ್ತಿಸಿ. ಪೊಲೀಸ್ ಕಲ್ಯಾಣ ನಿಧಿಯಡಿ ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಸೇರಿ ವಿವಿದ ಉದ್ದೇಶಗಳಿಗೆ ಬಳಸಲು ನಿರ್ದೇಶಿಸಿದರು. ಜಿಲ್ಲಾ ಸಶಸ್ತ್ರ ವಿಭಾಗಕ್ಕೆ ಭೇಟಿ ನೀಡಿ ಇಲಾಖೆ ವಾಹನಗಳನ್ನು ಪರಿಶೀಲಿಸಿದರು. ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಧರ್ಮೇಂದರ್ಕುಮಾರ್ ಮೀನಾ, ಎಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿಗಳಾದ ಟಿ.ಬಿ.ರಾಜಣ್ಣ, ಚೈತ್ರಾ. ಡಿಎಆರ್ ಡಿವೈಎಸ್ಪಿ ಎಸ್.ಎಸ್.ಗಣೇಶ್ ಇತರರಿದ್ದರು.