More

    ಗಾಂಜಾ ಮತ್ತಲ್ಲಿ ರಸ್ತೆಯಲ್ಲಿ ರಂಪಾಟ

    ಭಟ್ಕಳ: ಪಟ್ಟಣದ ತಾಲೂಕು ಪಂಚಾಯಿತಿ ಎದುರು ಗಾಂಜಾ ವ್ಯಸನಿಯೊಬ್ಬ ಗಂಟೆಗೂ ಅಧಿಕ ಕಾಲ ರಂಪಾಟ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಇಷ್ಟೆಲ್ಲಾ ನಡೆದರೂ ಸ್ಥಳಕ್ಕೆ ಪೊಲೀಸರು ಬಂದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಗಾಂಜಾ ವ್ಯಸನಿಯೊಬ್ಬ ಅಮಲಿನಲ್ಲಿ ಬೈಕ್ ಸವಾರರನ್ನು ತಡೆಗಟ್ಟಿ ಹಲ್ಲೆ ನಡೆಸಲು ಯತ್ನಿಸುತ್ತಿದ್ದ. ಬೈಕ್ ಸವಾರರು ಇವನಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಬದಿ ಸಾಕಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಕೊನೆಗೆ ಅವನ ರಂಪಾಟದಿಂದ ಬೇಸತ್ತ ಕೆಲವು ಯುವಕರು ಆತನನ್ನು ಹಗ್ಗದಿಂದ ಕಟ್ಟಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬರಲಿಲ್ಲ. ಕೊನೆಗೆ ಆತನನ್ನು ಸಾರ್ವಜನಿಕರೇ ಮನೆಗೆ ಕಳುಹಿಸಿದರು.

    ನಿಯಂತ್ರಣಕ್ಕೆ ಆಗ್ರಹ: ಭಟ್ಕಳದಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಗಾಂಜಾ ವ್ಯಸನಿಗಳು ಹಾಡಹಗಲೇ ರಂಪಾಟ ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೆ ಯುವಕನೊಬ್ಬ ಮದಿನಾ ಕಾಲನಿಯಲ್ಲಿ ಗಾಂಜಾ ಅಮಲಿನಲ್ಲಿ ಚಾಕು ಹಿಡಿದುಕೊಂಡು ಜನರನ್ನು ಭಯಭೀತಗೊಳಿಸಿದ್ದ. ಇಂತಹ ವ್ಯಸನಿಗಳು ಹಾಗೂ ಗಾಂಜಾ ಮಾರಾಟಗಾರರನ್ನು ಪತ್ತೆ ಹಚ್ಚಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts