ಕುಮಟಾ: ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಚೆನ್ನೈ, ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ಆಶ್ರಯದಲ್ಲಿ ಬರ್ಗಿಯ ವಿ.ಆರ್. ಪಟಗಾರರ ಕಗ್ಗ ಭತ್ತ ಬೆಳೆದ ಗಜನಿ ಗದ್ದೆಯಲ್ಲಿ ಕಾಗಳಸಿ ಮೀನಿನ ಮರಿಗಳನ್ನು ಬಿಡುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ವೇಳೆ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜಿ.ವಿ.ನಾಯಕ ಮಾತನಾಡಿ, ಅಘನಾಶಿನಿ ನದಿ ಮುಖಜ ಪ್ರದೇಶವು ಕಗ್ಗ ಭತ್ತದ ಆಗರವಾಗಿದೆ. ಇಲ್ಲಿನ ಸಮುದ್ರ ಹಿನ್ನೀರು ಪ್ರದೇಶದಲ್ಲಿ ಬೆಳೆಯುವಂತಹ ಏಕೈಕ ಭತ್ತದ ತಳಿಯೇ ಕಗ್ಗ. ಇಂತಹ ಅಮೂಲ್ಯವಾದ ಭತ್ತದ ತಳಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅನಿ ವಾರ್ಯ. ಇದೇ ರೀತಿ ಕರಾವಳಿ ಜನರ ಇನ್ನೊಂದು ಪ್ರಮುಖ ಉದ್ಯೋಗ ಮೀನುಗಾರಿಕೆ. ಅಘನಾಶಿನಿ ಗಜನಿ ಭೂಮಿಯಲ್ಲಿ ಮುಂಗಾರಿನಲ್ಲಿ ಕಗ್ಗ ಭತ್ತ ಬೆಳೆಯುವುದು ಮತ್ತು ಹಿಂಗಾರಿನಲ್ಲಿ ಮೀನು ಸಾಕಣಿಕೆ ಮಾಡುವುದರಿಂದ ಸಂಪನ್ಮೂಲಗಳ ಸದ್ಬಳಕೆಯಾಗುತ್ತಿದೆ ಎಂದರು. ಮೀನುಗಾರಿಕೆ ಸಹಾಯಕ ನಿರ್ದೇಶಕ ರವೀಂದ್ರ ಎನ್. ತಳೇಕರ, ಕೃಷಿ ಅಧಿಕಾರಿ ಅಕ್ರಮ, ಡಾ. ಎಸ್.ಜಿ. ರಾಯ್ಕರ್ ಇದ್ದರು.
ಕಗ್ಗ ಬೀಜ ಲಭ್ಯ: ಎಂಎಸ್ಎಸ್ಆರ್ಎಫ್ ಕುಮಟಾ ಹಾಗೂ ಮಾಸ್ತಿಕಟ್ಟೆ ಬಳಿಯ ಕೃಷಿ ಸಂಶೋಧನಾ ಕೇಂದ್ರ ಆವಾರದಲ್ಲಿ ಕಗ್ಗ ಭತ್ತ ಬೆಳೆಯುವ ಆಸಕ್ತ ರೈತರಿಗೆ ಉಚಿತವಾಗಿ ಕಗ್ಗದ ಬೀಜ ವಿತರಿಸಲಾಗುವುದು. ಮಾಹಿತಿಗಾಗಿ ಮಣಿಕಂಠ ಗುನಗ 9740196073 ಇವರನ್ನು ಸಂರ್ಪಸಬಹುದಾಗಿದೆ.