ಹುಬ್ಬಳ್ಳಿ: ವೃತ್ತಿಪರ ಹಾಗೂ ಖತರ್ನಾಕ್ ಸರಗಳ್ಳ ತಾಲೂಕಿನ ಕೋಳಿವಾಡ ಗ್ರಾಮದ ವಿಶ್ವನಾಥ ಸೋಮಪ್ಪ ಕೋಳಿವಾಡನಿಗೆ ಸರಗಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. 2016ರ ಮಾ. 1ರಂದು ರೇಣುಕಾ ನಗರದಲ್ಲಿ ಗೀತಾಬಾಯಿ ಪಡಸಲಗೀಕರ (65) ಎಂಬುವರು ರಸ್ತೆಬದಿ ನಡೆದುಕೊಂಡು ಹೊರಟಿದ್ದರು. ಆ ವೇಳೆ ಕೆಂಪು ಬಣ್ಣದ ಬೈಕ್ನಲ್ಲಿ ಬಂದಿದ್ದ ವಿಶ್ವನಾಥ ಕೋಳಿವಾಡ ಏಕಾಏಕಿ ಗೀತಾಬಾಯಿ ಕೊರಳಿಗೆ ಕೈಹಾಕಿ ಚಿನ್ನದ ಚೈನು ಹಾಗೂ ಮಂಗಲಸೂತ್ರ ಕಿತ್ತುಕೊಳ್ಳಲು ಮುಂದಾಗಿದ್ದ. ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಚಿನ್ನದ ಚೈನು ಹಾಗೂ ಅರ್ಧ ಮಂಗಲಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಶೋಕನಗರ ಪೊಲೀಸ್ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ಹಾಗೂ ತಂಡ ವಿಶ್ವನಾಥನನ್ನು ಬಂಧಿಸಿ, ಗೋಕುಲ ರೋಡ್ ಠಾಣೆಗೆ ವರ್ಗಾಯಿಸಿತ್ತು. ಬಳಿಕ ಇನ್ಸ್ಪೆಕ್ಟರ್ ಡಿ.ಕೆ. ಪ್ರಭುಗೌಡ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾ ಜೋಗೋಜಿ ಅವರು ವಿಶ್ವನಾಥ ಕೋಳಿವಾಡನಿಗೆ ಮೂರು ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ಆತನಿಂದ ಕದ್ದ ಮಾಲು ಖರೀದಿಸಿದ್ದ ಜೈನ್ ಜುವೆಲರ್ಸ್ ಕೆಲಸಗಾರ ವೆಂಕಟೇಶ ನಾರಾಯಣಸಾ ಕಬಾಡೆ ಎಂಬುವನಿಗೆ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕ ಶ್ರೀಕಾಂತ ದಯಣ್ಣವರ ವಾದ ಮಂಡಿಸಿದ್ದರು.