ಹುಬ್ಬಳ್ಳಿ: ರಾತ್ರಿ ವೇಳೆ ಮಾರುಕಟ್ಟೆಯಲ್ಲಿ ಅಂಗಡಿಗಳ ಶೆಟರ್ಸ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಉಪನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿ, 30,300 ರೂ. ನಗದು, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಫೈರೋಜ್ ಜಫ್ರಿ ರಾಜೇಸಾಬ (38) ಬಂಧಿತ ಆರೋಪಿ. ಕ್ಲಬ್ ರಸ್ತೆಯ ವಿನಾಯಕ ಮೆಡಿಕಲ್ ಶಾಪ್ ಹಾಗೂ ಮಂತ್ರಾ ಹೋಟೆಲ್ ಬಳಿ ಇರುವ ಅಂತ್ರಾ ಸಸ್ಯಾಹಾರಿ ಹೋಟೆಲ್ನ ಶೆಟರ್ಸ್ ಮುರಿದು ಕಳ್ಳತನ ಮಾಡಿದ್ದ. ಆ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ಸ್ಪೆಕ್ಟರ್ ಎಸ್.ಕೆ ಹೊಳೆಯಣ್ಣವರ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚಿದೆ. ಸಿಬ್ಬಂದಿ ಎಸ್.ಎಸ್ ಪಾಂಡೆ, ಎಂ.ಬಿ ಧನಿಗೊಂಡ, ಎಂ.ವೈ ಯಕ್ಕಡಿ, ಕೆ.ಎನ್ ನೆಲಗುಡ್ಡ, ಬಿ.ಎಫ್ ಸುಣಗಾರ, ಬಿ.ಎಂ ಹೆದ್ದೇರಿ, ರೇಣು ಸಿಕ್ಕಲಗಾರ, ರವಿ ಹೊಸಮನಿ, ಮಾಬುಸಾಬ ಮುಲ್ಲಾ, ಮಂಜು ಕಮತದ ತಂಡದಲ್ಲಿದ್ದರು.
ಅತ್ಯಾಚಾರ ಆರೋಪಿ ಬಂಧನ
ಧಾರವಾಡ: ತಾಲೂಕಿನ ಮಾದನಬಾವಿ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ಕೆಲ ತಿಂಗಳ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಗ್ರಾಮದ ಸಮೀರ ಮುಲ್ಲಾನವರ ಎಂಬಾತನನ್ನು ಬಂಧಿಸಲಾಗಿದೆ. ಮೇ 21ರಂದು ನಡೆದ ಪ್ರಕರಣದಲ್ಲಿ ಈಗಾಗಲೇ ಬಸವರಾಜ ಕಿರಾಳೆ ಎಂಬಾತನನ್ನು ಬಂಧಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ಇನ್ನೋರ್ವನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಗುರುವಾರ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಕ್ಷಣದಲ್ಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್ ಅವರು ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದ್ವಿಚಕ್ರ ವಾಹನಕ್ಕೆ ಬೆಂಕಿ
ಹುಬ್ಬಳ್ಳಿ: ಚಲಿಸುತ್ತಿದ್ದ ದ್ವಿಚಕ್ರ ವಾಹನ ಆಯತಪ್ಪಿ ಬಿದ್ದು ಶಾರ್ಟ್ ಸರ್ಕೀಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಘಟನೆ ತಾಲೂಕಿನ ಪಾಲಿಕೊಪ್ಪ ಕ್ರಾಸ್ ಬಳಿ ಗುರುವಾರ ಸಂಭವಿಸಿದೆ. ಗಂಡ- ಹೆಂಡತಿ ಇಬ್ಬರೂ ಹಾವೇರಿ ಜಿಲ್ಲೆ ಬ್ಯಾಡಗಿಯಿಂದ ಹುಬ್ಬಳ್ಳಿ ಕಡೆಗೆ ಬೈಕ್ನಲ್ಲಿ ಬರುತ್ತಿದ್ದರು. ಆಯತಪ್ಪಿ ಬೈಕ್ನಿಂದ ಕೆಳಗೆ ಬಿದ್ದರು. ಆ ವೇಳೆ ಶಾರ್ಟ್ ಸರ್ಕೀಟ್ನಿಂದ ಬೈಕ್ಗೆ ಬೆಂಕಿ ಹೊತ್ತಿಕೊಂಡಿದೆ. ಕೆಳಗೆ ಬಿದ್ದ ರಭಸಕ್ಕೆ ಸವಾರ ಗಾಯಗೊಂಡಿದ್ದು, ಹಿಂಬದಿ ಕುಳಿತಿದ್ದ ಮಹಿಳೆಯ ಕಾಲು ಮುರಿದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.