ಕಡೂರು: ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ತೋಟಗಾರಿಕಾ ಸಚಿವ ನಾರಾಯಣ ಗೌಡಗೆ ಮಾಡಿದ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ತಿಳಿಸಿದರು.
ತಾಲೂಕಿನ ರೈತರು ಸಂಕಷ್ಟದಲ್ಲಿರುದನ್ನು ಮನಗಂಡು ಜೂ.11ರಂದು ವಿಧಾನಸೌಧದಲ್ಲಿ ರೈತರ ಪರವಾಗಿ ಪಕ್ಷದ ಮುಖಂಡರೊಂದಿಗೆ ನಿಯೋಗ ತೆರಳಿ ತೋಟಗಾರಿಕೆ ಸಚಿವ ನಾರಾಯಣ ಗೌಡ ಹಾಗೂ ಮುಖ್ಯಮಂತ್ರಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು ಎಂದು ‘ವಿಜಯವಾಣಿ’ಗೆ ತಿಳಿಸಿದರು.
ಮನವಿ ಸ್ವೀಕರಿಸಿದ ಸಚಿವರು, ಎರಡು ದಿನಗಳ ಹಿಂದೆ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಜತೆ ತೆಂಗು ಬೆಳೆಗಾರರ ಸಂಕಷ್ಟದ ಬಗ್ಗೆ ರ್ಚಚಿಸಲಾಗಿದೆ. ಮುಖ್ಯಮಂತ್ರಿ ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ತೀರ್ವನಿಸುವ ಭರವಸೆ ನೀಡಿದ್ದಾರೆ. ಕೊಬ್ಬರಿ ಬೆಂಬಲ ಬೆಲೆ ನೀಡುವ ಬಗ್ಗೆ ಸಚಿವ ಮಾಧುಸ್ವಾಮಿ ಅವರೂ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
ಮುಂದಿನ ವಾರದೊಳಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರೈತ ಮುಖಂಡರ ಸಭೆ ಕರೆಯಲಾಗಿದೆ. ಇದಕ್ಕೆ ನನ್ನನ್ನು ಆಹ್ವಾನಿಸಲಾಗಿದೆ. ಆಗಸ್ಟ್ ಮೊದಲ ವಾರ ಕೊಬ್ಬರಿ ಖರೀದಿ ಕೇಂದ್ರ ಪ್ರಾರಂಭವಾಗುವ ಸುಳಿವು ನೀಡಿದ್ದು ರೈತರು ಕಡಿಮೆ ಬೆಲೆಗೆ ಕೊಬ್ಬರಿಯನ್ನು ಮಾರಾಟ ಮಾಡದೆ ಆಗಸ್ಟ್ವರೆಗೆ ಕಾಯಬೇಕು ಎಂದು ಮನವಿ ಮಾಡಿದರು.