ಚಿಂತಾಮಣಿ: ರಸ್ತೆ ಬದಿಯ ಚರಂಡಿಯಲ್ಲಿ ಟೊಮ್ಯಾಟೊ ರಾಶಿ, ಕೆಸರುಗದ್ದೆಯಂತಾದ ಆವರಣದೊಳಗಿನ ಕಾಂಕ್ರಿಟ್ ರಸ್ತೆಗಳು, ಬಿಸಾಡಿರುವ ತರಕಾರಿ ಜತೆ ಕೊಳಚೆ ಸೇರಿ ದುರ್ನಾತ, ರೈತರು, ವ್ಯಾಪಾರಸ್ಥರಿಗೆ ರೋಗದ ಭೀತಿ….!
ಇವು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಚಿಂತಾಮಣಿಯ ಎಪಿಎಂಸಿ ಟೊಮ್ಯಾಟೊ ಮಾರುಕಟ್ಟೆಯಲ್ಲಿ ಅವ್ಯವಸ್ಥೆ. ವಾರದ ಹಿಂದೆ ಟೊಮ್ಯಾಟೊ ಮಾರುಕಟ್ಟೆ ಸ್ವಚ್ಛತೆಗೆ ಆಗ್ರಹಿಸಿ ಹಮಾಲಿಗಳು, ರೈತರು, ವಾಹನಗಳ ಚಾಲಕರು ಮತ್ತು ವ್ಯಾಪಾರಸ್ಥರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದ್ದರು, ಆದರೂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಶುಚಿತ್ವಕ್ಕೆ ಮುಂದಾಗದೆ ಅನೈರ್ಮಲ್ಯ ಕಂಡೂ ಕಾಣದಂತಿದ್ದರು.
ಕೊನೆಗೆ ಮಾರುಕಟ್ಟೆಯ ಕಮೀಷನ್ ಏಜೆಂಟ್ ಊಲವಾಡಿ ಕೃಷ್ಣಪ್ಪ ಮಾರುಕಟ್ಟೆಯ ಕೆಲ ಭಾಗಗಳಲ್ಲಿ ಶುಚಿತ್ವಕ್ಕೆ ಮುಂದಾಗಿದ್ದರು. ಆದರೆ, ಶುಕ್ರವಾರ ರಾತ್ರಿ ಬಿದ್ದ ಮಳೆಗೆ ಮಾರುಕಟ್ಟೆ ಮತ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ಅಡಿ ಇಡಲು ಅಸಹ್ಯ ಪಡುವಂತಾಗಿದೆ.
ಲೋಡ್, ಅನ್ಲೋಡ್ ಮಾಡಲು ಪರದಾಟ: ಮಾರುಕಟ್ಟೆ ಮೊದಲೇ ಕೆಸರುಗದ್ದೆಯಾಗಿದೆ, ಇದರೊಂದಿಗೆ ಕೊಳೆತ ಟೊಮ್ಯಾಟೊವನ್ನು ಸಹ ಅಲ್ಲಿನ ಚರಂಡಿಗಳಲ್ಲಿ ಸುರಿಯಲಾಗಿದ್ದು, ದುರ್ವಾಸನೆ ಸಹಿಸಲಾಗುತ್ತಿಲ್ಲ, ಚರಂಡಿ ತುಂಬಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುವುದರಿಂದ ಲೋಡ್, ಅನಲೋಡ್ ಮಾಡಲು ತೊಂದರೆಯಾಗುತ್ತದೆ ಎಂಬುದು ಹಮಾಲಿಗಳ ಅಳಲು
ಗಾಂಧಿನಗರ ಬಡಾವಣೆ ಮತ್ತು ಊಲವಾಡಿಗೆ ಹೋಗುವ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಮತ್ತು ಚರಂಡಿಗಳಲ್ಲಿ ಟೊಮ್ಯಾಟೊ ಸುರಿದಿರುವ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಗೆ ಹರಿಯುತ್ತಿದೆ. ಈಗಲಾದರೂ ಎಪಿಎಂಸಿ ಅಧಿಕಾರಿಗಳು ಶುಚಿತ್ವ ಕಾಪಾಡಲು ಮುಂದಾಗಬೇಕು.
ಅಬ್ದುಲ್ ಖಯ್ಯೂಂ, ಗಾಂಧಿನಗರ ಬಡಾವಣೆ ನಿವಾಸಿಕರೊನಾ ಹಿನ್ನೆಲೆಯಲ್ಲಿ ಹರಾಜು ಆಗದ ಟೊಮ್ಯಾಟೊವನ್ನು ಇಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಪ್ರತಿದಿನ 20 ರಿಂದ 25 ಲೋಡ್ ಕಸ ಸಾಗಣೆ ಮಾಡುತ್ತಿದ್ದೇವೆ, ಶುಚಿತ್ವಕ್ಕೆ ಮಳೆಯೂ ಅಡ್ಡಿಯಾಗಿದೆ, ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು.
ಉಮಾ ಎಪಿಎಂಸಿ ಕಾರ್ಯದರ್ಶಿ