ಹುಬ್ಬಳ್ಳಿ: ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನ ಬೆಳೆಗಳೇ ಬಾರದೆ ಕಂಗೆಟ್ಟಿದ್ದ ರೈತ ಸಮುದಾಯ ಇದೀಗ ಕರೊನಾ ಸೋಂಕಿನ ಭಯದಿಂದಾಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಒಂದಿಷ್ಟು ಬೆಳೆಗಳು ಕೈ ಸೇರಿದ್ದರೂ ಅವುಗಳನ್ನು ಮಾರಾಟ ಮಾಡಲು ಆಗದೇ ಪರದಾಡುವಂತಾಗಿದೆ. ಇಷ್ಟೇ ಅಲ್ಲ ಬಾಕಿ ಉಳಿದಿರುವ ಕೃಷಿ ಚಟುವಟಿಕೆಗಳನ್ನು ಪೂರ್ತಿ ಮಾಡಿಕೊಳ್ಳಲು ಕರೊನಾ ಭಯದಿಂದ ಕಾರ್ವಿುಕರು ಸಿಗದಂತಾಗಿದೆ.
ಹಿಂಗಾರು ಹಂಗಾಮಿನ ಕಡಲೆ, ಗೋದಿ, ಜೋಳ, ಕುಸುಬೆ ಬೆಳೆಗಳ ಕೊಯ್ಲು ಮುಗಿದಿದೆ. ಪ್ರಮುಖ ವಾಣಿಜ್ಯ ಬೆಳೆ ಕಡಲೆ ಒಕ್ಕಣೆ ಮಾಡಿ ರೈತರು ಸಂಗ್ರಹ ಮಾಡಿಕೊಂಡಿದ್ದಾರೆ. ಆದರೆ, ಮಾರಾಟ ಮಾಡುವ ಹೊತ್ತಿಗೆ ಕರೊನಾ ಆತಂಕ ಒಕ್ಕರಿಸಿದೆ.
ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭವಾಗಿದ್ದರೂ ಈವರೆಗೆ ಬರೀ ನೋಂದಣಿ ಮಾಡಿಕೊಳ್ಳಲಾಗಿದೆ. ಧಾರವಾಡ ಜಿಲ್ಲೆಯ ವಿವಿಧ ಖರೀದಿ ಕೇಂದ್ರಗಳಲ್ಲಿ ಕಡಲೆ ಖರೀದಿ ಆರಂಭವಾಗಿ ಒಂದೆರಡು ದಿನ ಕಳೆಯುವುದರಲ್ಲಿ ಬಂದ್ ಮಾಡಲಾಗಿದೆ. ಇನ್ನು ಪುನಾರಂಭ ಆಗುವವರೆಗೂ ರೈತರು ಕಾಯಬೇಕಾಗಿದೆ. ಗ್ರಾಮೀಣ
ಭಾಗದಲ್ಲಿ ರೈತರು, ಕೃಷಿ ಕಾರ್ವಿುಕರು ಕರೊನಾದಿಂದ ಹೆಚ್ಚು ತೊಂದರೆ ಅನುಭವಿಸುವಂತಾಗಿದೆ.
ರೈತರಿಗೆ ನೆರವಾಗಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿ ಎಲ್ಲ ರೀತಿಯ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಮುಂಗಡವಾಗಿ ಹಣ ಪಾವತಿಸಲು ಸರ್ಕಾರ ಮುಂದಾಗಿದೆ. ಆದರೆ, ಈ ವಿಷಯದಲ್ಲಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕಿದೆ. ರೈತರು, ಹಿರಿಯ ನಾಗರಿಕರು, ಅಂಗವಿಕಲರು ಸೇರಿ ಎಲ್ಲ ಫಲಾನುಭವಿಗಳ ಹಣ ಅವರ ಖಾತೆಗೆ ಹಾಕುವ ಮೂಲಕ ಸಂಕಷ್ಟದ ದಿನದಲ್ಲಿ ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕು.
ಇನ್ನು ಬೆಳೆವಿಮೆ, ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾದ ಪ್ರಯೋಜನಗಳನ್ನು ಕೃಷಿ ಇಲಾಖೆ ಹೆಚ್ಚು ಮುತುವರ್ಜಿ ವಹಿಸಿ ಸಕಾಲಕ್ಕೆ ಸಿಗುವಂತೆ
ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರಿಗೆ ಯಾವುದೇ ಅಡೆತಡೆ ಇಲ್ಲದೇ ಸೌಲಭ್ಯಗಳು ಸಿಗುವಂತೆ ಮಾಡಿ ಎಂಬುದು ಅನ್ನದಾತರ ಅರಿಕೆ.
ತರಕಾರಿ ಬೆಳೆದವರ ಗೋಳು: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯದೆಲ್ಲೆಡೆ ಲಾಕ್ಡೌನ್ ಘೋಷಣೆಯಾದ ನಂತರ ತರಕಾರಿ
ಬೆಳೆಗಾರರು ಹೆಚ್ಚು ಹೊಡೆತಕ್ಕೆ ಸಿಲುಕಿದ್ದಾರೆ. ಭಾರತ ಲಾಕ್ಡೌನ್ ಘೊಷಣೆಯಿಂದ ಬಹುತೇಕ ಕಡೆಗಳಲ್ಲಿ ತರಕಾರಿ ಮಾರಾಟ, ಸಂತೆಗಳನ್ನು ರದ್ದು ಪಡಿಸಲಾಯಿತು. ಆಗ ತರಕಾರಿ ಕೊಂಡು ತಂದು ಮಾರಾಟ ಮಾಡುವವರು ಖರೀದಿಗೆ ಹಿಂದೇಟು ಹಾಕಿದರು. ಈಗಲೂ ಸಂತೆಗಳು ಇರದೇ ತರಕಾರಿ ಬೆಳೆದದ್ದು ಪೂರ್ತಿ ಮಾರಾಟವಾಗುತ್ತಿಲ್ಲ.
ಮಹಾನಗರ ಪಾಲಿಕೆ ಈಗ ಪ್ರತಿ ವಾರ್ಡ್ಗಳಲ್ಲಿ ಮಾರಾಟದ ವ್ಯವಸ್ಥೆ ಮಾಡುತ್ತಿದೆ. ಆದರೂ, ತರಕಾರಿಗೆ ಬೆಲೆ ಇಳಿಮುಖವಾಗುತ್ತಿದೆ. ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸಂತೆಗೆ ಮಾರಾಟಕ್ಕೆ ಒಯ್ಯುತ್ತಿದ್ದ ರೈತರು ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಗಟು ಮಾರುಕಟ್ಟೆಗೆ ತರಕಾರಿ ತರಲೂ ಆಗದೇ, ಸಂತೆಗೂ ಹೋಗದೇ ರಸ್ತೆ ಬದಿ ಅಲ್ಲಲ್ಲಿ ಬುಟ್ಟಿ ತುಂಬಿ ಇಟ್ಟು ಸಂಜೆಯವರೆಗೂ ಗ್ರಾಹಕರಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ.
ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಹೋಗುವ ಪ್ರಮುಖ ರಸ್ತೆಗಳಲ್ಲಿ ಈ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತವೆ. ಒಟ್ಟಾರೆ ಬೆಳೆದವನಿಗೆ ಏನೂ ಸಿಗದ ಸ್ಥಿತಿ ಬಂದಿದೆ. ರೈತ ಬೆಳೆದ ತರಕಾರಿಯನ್ನೇ ನಗರ ಪ್ರದೇಶದಲ್ಲಿ ಕೆಲವರು ವಾಹನಗಳಲ್ಲಿ ಇಟ್ಟುಕೊಂಡು ಬಡಾವಣೆಗಳಿಗೆ ತೆರಳಿ 4 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.