ಐನಾಪುರ: ಕೆನರಾ ಬ್ಯಾಂಕ್ ರೈತರ ಹಿತ ಕಾಪಾಡುತ್ತ ಬಂದಿದ್ದು, ಗ್ರಾಹಕರ ಸಹಕಾರದಿಂದ ದೇಶದ ಎರಡನೇ ದೊಡ್ಡ ಬ್ಯಾಂಕ್ ಆಗಿದೆ ಎಂದು ಕೆನರಾ ಬ್ಯಾಂಕಿನ ರಿಜಿನಲ್ ಮ್ಯಾನೇಜರ್ ಕೃಷ್ಣಮೂರ್ತಿ ಹೇಳಿದರು.
ಐನಾಪುರ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕೆನರಾ (ಸಿಂಡಿಕೇಟ್) ಬ್ಯಾಂಕ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಬೆಳೆ ಸಾಲ, ಫಾರ್ಮ್ಹೌಸ್ ಸಾಲ, ಕೃಷಿ ಅಭಿವೃದ್ಧಿ ಸಾಲ, ಗೃಹ ಸಾಲ, ಚಿನ್ನಾಭರಣ ಸಾಲ, ದೊಡ್ಡ ಪ್ರಮಾಣದ ಹೈನುಗಾರಿಕೆ, ಶೈಕ್ಷಣಿಕ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆದು ಆರ್ಥಿಕ ಸಬಲರಾಗಬೇಕು ಎಂದರು.
ರೈತ ಮುಖಂಡ ದಾದಾ ಗೌಡ ಪಾಟೀಲ ಮಾತನಾಡಿ, ದೊಡ್ಡ ಉದ್ಯಮಿಗಳು ಸಾಲ ಪಡೆದು ಬ್ಯಾಂಕಿಗೆ ವಂಚಿಸಿ ಸುಸ್ತಿದಾರರಾಗಿದ್ದಾರೆ. ರೈತರು ಪ್ರಾಮಾಣಿಕವಾಗಿ ಸಾಲ ತುಂಬುವ ಪ್ರಯತ್ನ ಮಾಡುತ್ತಾರೆ ಎಂದರು.
ರೈತರಿಗೆ ಸಾಲ ಪತ್ರ ವಿತರಿಸಲಾಯಿತು. ಬಸವರಾಜ ಕಾರ್ಚಿ, ಶಾಖಾ ಮ್ಯಾನೇಜರ್ ಧನಂಜಯಸಿಂಗ್, ಅಧಿಕಾರಿಗಳಾದ ನವೀನ ಬಕಾರಿ, ಬಂಡು ರೆಂಗೆ, ಅರುಣ ಗಾಣಿಗೇರ, ಉದಯ ನಿಡಗುಂದಿ, ಗುಂಡು ಮುತಾಲಿಕ, ವಿಜಯ ಪೋತದಾರ, ಮಹಾಂತೇಶ ಮಹಾಜನ, ಈರಣ್ಣ ಕೋಲಾರ ಹಾಗೂ ರೈತರು ಇದ್ದರು. ನವೀನ ಬಕಾರಿ ಸ್ವಾಗತಿಸಿ, ನಿರೂಪಿಸಿದರು.