ಚಿತ್ರದುರ್ಗ: ಮಂಡ್ಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆಯನ್ನು ಜಿಲ್ಲಾ ಕುರುಬರ ಸಂಘ ಖಂಡಿಸಿದೆ.
ಕೆರಗೋಡು ಹನುಮಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ವೇಳೆ, ಮುಖಂಡರ ಪ್ರಚೋದನೆಯಿಂದ ಕಲ್ಲು ತೂರಾಟಕ್ಕೆ ಕಾರಣವಾಗಿದ್ದು, ವಿವಾದವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಮುಖಂಡರು ದೂರಿದರು.
ಚಿತ್ರದುರ್ಗದಲ್ಲಿನ ಶೋಷಿತರ ಜಾಗೃತಿ ಸಮಾವೇಶ ಯಶಸ್ಸು ಸಹಿಸಲಾಗದೆ ಕುಮಾರಸ್ವಾಮಿ ಭಯ, ದಬ್ಬಾಳಿಕೆ ವಾತವರಣ ಸೃಷ್ಟಿಸಲು ಮುಂದಾಗಿದ್ದಾರೆ ಎಂದರು.
ಇಂತಹ ಕೃತ್ಯಗಳಿಗೆ ಕುಮ್ಮುಕ್ಕು ನೀಡಿದರೆ ರಾಜ್ಯಾದ್ಯಂತ ಬಿಜೆಪಿ, ಜೆಡಿಎಸ್ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ. ಈ ಪಕ್ಷಗಳಲ್ಲಿರುವ ಶೋಷಿತ ಸಮುದಾಯಗಳ ಮುಖಂಡರು ಪಕ್ಷಗಳನ್ನು ತ್ಯಜಿಸಿ ಹೊರಬರದಿದ್ದರೆ ಶೋಷಿತ ಸಮುದಾಯಗಳ ಆಕ್ರೋಶ ಎದರಿಸಬೇಕಾಗುತ್ತದೆ.
ಶೋಷಿತ ಸಮುದಾಯಗಳು ಕೂಡ ಬಹುಸಂಖ್ಯಾತ ಹಿಂದುಗಳಾಗಿದ್ದಾರೆ. ಪ್ರಚೋದನಕಾರಿ ಕೃತ್ಯಗಳಿಂದ ಯುವಜನರ ದಾರಿ ತಪ್ಪಿಸುವ ಕೆಲಸ ನಿಲ್ಲಿಸದಿದ್ದರೆ ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ ಹಾಗೂ ಇಂತಹ ಕೃತ್ಯ ಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್, ಖಜಾಂಚಿ ಜಿ.ಟಿ.ಮೃತ್ಯಂಜಯ, ಮುಖಂಡರಾದ ಸಜ್ಜನಕೆರೆ ರಾಜು, ಎಸ್ಬಿಎಲ್ ಮಲ್ಲಿಕಾರ್ಜುನ್, ಎಂ.ವಿ.ಮಾಳೇಶ್, ಡಿ.ಉಮೇಶ್, ಜಯಶಂಕರ್, ನಿಶಾನಿ ಶಂಕರ್, ಎಚ್.ಸುರೇಶ್, ಕೆ.ಪಿ.ಶಿವರಾಜ್, ಸುರೇಶ್ ಉಗ್ರಾಣ, ದೇವರಾಜ್, ಮಾದಿಗ ಸಮುದಾಯದ ಅಣ್ಣಪ್ಪ ಮುದ್ದಾಪುರ ಮತ್ತಿತರರು ಇದ್ದರು.