ಮುಂಡರಗಿ: ತಾಲೂಕಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಹುಣಸೆ ಅರಣ್ಯ ಕೃಷಿ ಮಾಡಿದ್ದಾರೆ. ಈಗ ಲಾಭವನ್ನೂ ಗಳಿಸತೊಡಗಿದ್ದಾರೆ. ಹೊಲದಲ್ಲಿ ಅರಣ್ಯ ಬೆಳೆಸುವ ಮೂಲಕ ಪರಿಸರ- ವಾತಾವರಣಕ್ಕೆ ವಿಶಿಷ್ಟ ಕೊಡುಗೆ ನೀಡಿದ ಖುಷಿಯನ್ನೂ ಅನುಭವಿಸುತ್ತಿದ್ದಾರೆ.
ಹುಣಸೆ ಬೆಳೆಯು ಪರಿಸರಕ್ಕೆ ಪೂರಕ ಮತ್ತು ಲಾಭದಾಯಕ ಎಂದರಿತ ತಾಲೂಕಿನ ಹಾರೋಗೇರಿ ಗ್ರಾಮದ ರೈತ ತಿಮ್ಮರಡ್ಡೆಪ್ಪ ಮೇಟಿ ಅವರು ತಮ್ಮ 7.5 ಎಕರೆ ಜಮೀನಿನಲ್ಲಿ ಸಂಪೂರ್ಣವಾಗಿ ಹುಣಸೆ ಅರಣ್ಯ ಕೃಷಿ ಮಾಡಿದ್ದಾರೆ. 13 ವರ್ಷಗಳ ಹಿಂದೆ ಸಸಿ ನೆಟ್ಟು ಅಕ್ಕರೆಯಿಂದ ಆರೈಕೆ ಮಾಡಿದ್ದರಿಂದ ಇಂದು ದೊಡ್ಡ ಮರಗಳಾಗಿ ಬೆಳೆದು ನಿಂತಿವೆ. ವಾರ್ಷಿಕವಾಗಿ ಲಕ್ಷಾಂತರ ರೂ. ವರಮಾನ ತಂದುಕೊಡುತ್ತಿವೆ.
2007ರಲ್ಲಿ ತಿಮ್ಮರಡ್ಡೆಪ್ಪ ಅವರು ಬೈಫ್ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರದಿಂದ ಖುಷ್ಕಿ ಜಮೀನಿನಲ್ಲಿ 30 ಅಡಿಗೆ ಒಂದರಂತೆ ಮಡಿಗಳನ್ನು ಮಾಡಿ ಕೊಟ್ಟಿಗೆ ಗೊಬ್ಬರ ಹಾಕಿ 210 ಹುಣಸೆ ಗಿಡಗಳನ್ನು ನೆಟ್ಟರು. ಒಂದು ವರ್ಷದೊಳಗೆ ಸುಮಾರು 120 ಗಿಡಗಳು ರೋಗಬಾಧೆಯಿಂದ ನಾಶವಾದವು. ಆಗ ಸ್ಥಳೀಯ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದಿಂದ ಮತ್ತೆ 120 ಹುಣಸೆ ಸಸಿಗಳನ್ನು ಪಡೆದು ಬೆಳೆಸಿದರು. ಈಗ 210 ಗಿಡಗಳು ಬೃಹದಾಕಾರವಾಗಿ ಬೆಳೆದುನಿಂತಿವೆ.
ಹುಣಸೆ ಕೃಷಿ ಮಾಡಿದ ಪ್ರಾರಂಭದಲ್ಲಿ ನಿರಂತರ 3 ವರ್ಷಗಳವರೆಗೆ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿದ್ದಾರೆ. ಗ್ರಾಮದ ರೈತರ ಬೋರ್ವೆಲ್ನಿಂದ ಒಂದು ಟ್ಯಾಂಕರ್ ನೀರಿಗೆ 150 ರೂಪಾಯಿಯಂತೆ ಖರ್ಚು ಮಾಡಿ ಹುಣಸೆ ಗಿಡಗಳಿಗೆ ನೀರು ಹಾಕಿ ಪೋಷಿಸಿದ್ದಾರೆ.
ಹುಣಸೆ ಕೃಷಿ ಅರಣ್ಯ ಬೆಳೆಸುವ ಪ್ರಾರಂಭದಲ್ಲಿ 3 ವರ್ಷಗಳವರೆಗೆ ಗಿಡಗಳ ನಡುವೆ ಸೂರ್ಯಕಾಂತಿ,
ಗುತ್ತಿಗೆಗೆ ಹುಣಸೆ ಮಾರಾಟ: ಹುಣಸೆ ಕಾಯಿ ಬಿಡಲು ಪ್ರಾರಂಭಿಸಿದಾಗ ವರ್ಷಕ್ಕೆ 20ರಿಂದ 50 ಸಾವಿರ ರೂ.ಗೆ ಬೇರೆಯವರಿಗೆ 210 ಗಿಡಗಳ ಹುಣಸೆ ಹಣ್ಣು ಗುತ್ತಿಗೆ ನೀಡಿದ್ದರು. ಕಳೆದ ವರ್ಷ 1.45 ಲಕ್ಷ ರೂ.ಗೆ ಹುಣಸೆ ಹಣ್ಣು ಗುತ್ತಿಗೆ ನೀಡಿದ್ದರು. ಪ್ರಸಕ್ತ ವರ್ಷದಲ್ಲಿ ಗಿಡಗಳಲ್ಲಿ ಉತ್ತಮವಾಗಿ ಹೂವು ಬಿಟ್ಟಿದ್ದರಿಂದ 2.10 ಲಕ್ಷ ರೂ.ಗೆ ಗುತ್ತಿಗೆ ನೀಡಿದ್ದಾರೆ.
ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವ ಮತ್ತು ಉತ್ತಮ ಪರಿಸರ ಬೆಳೆಸುವ ದೃಷ್ಟಿಯಿಂದ ಹುಣಸೆ ಕೃಷಿ ಪ್ರಾರಂಭಿಸಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಇಳುವರಿ ಬರುತ್ತಿದೆ. ಹುಣಸೆ ಹಣ್ಣು ಗುತ್ತಿಗೆ ರೂಪದಲ್ಲಿ ಮಾರಾಟ ಮಾಡುತ್ತೇವೆ. ಪ್ರತಿ ವರ್ಷಕ್ಕೆ ಗಿಡಗಳಿಗೆ 20 ಚೀಲ ಉಪ್ಪು ಹಾಕುತ್ತೇವೆ. ಗಿಡಗಳ ಮಧ್ಯದ ಸಾಲುಗಳಲ್ಲಿ ಹರಗುತ್ತೇವೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಖರ್ಚು ಮಾಡುವುದಿಲ್ಲ. ಪರಿಸರ ಬೆಳೆಸುವುದರ ಜತೆಗೆ ಉತ್ತಮ ಲಾಭವು ದೊರೆಯುತ್ತಿರುವುದು ಖುಷಿ ತಂದಿದೆ.
| ತಿಮ್ಮರಡ್ಡೆಪ್ಪ ಮೇಟಿ