ರಟ್ಟಿಹಳ್ಳಿ: ಪಟ್ಟಣದಲ್ಲಿನ ಟಿಪ್ಪು ನಗರದ ರಸ್ತೆಯ ಸಿ.ಡಿ. (ಅಡ್ಡ ಚರಂಡಿ) ಒಡೆದು ಹೊಂಡ ನಿರ್ವಣವಾಗಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.
ಈ ರಸ್ತೆಗೆ 3-4 ವರ್ಷಗಳ ಹಿಂದೆ ಸಿ.ಡಿ. ನಿರ್ಮಾಣ ಮಾಡಲಾಗಿತ್ತು. ವರ್ಷದ ಹಿಂದೆ ಸಿ.ಡಿ.ಯ ಒಂದು ಬದಿಯಲ್ಲಿ ಕಾಂಕ್ರೀಟ್ ಕಳಚಿದ್ದು, ಕಬ್ಬಿಣದ ಸರಳುಗಳು ಮೇಲೆದ್ದಿವೆ. 5-6 ತಿಂಗಳ ಹಿಂದೆಯೇ ಸಿ.ಡಿ.ಯ ಗುಂಡಿಗೆ ತಾತ್ಕಾಲಿಕವಾಗಿ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು. ಇದೀಗ ಮತ್ತೆ ಯಥಾಸ್ಥಿತಿಗೆ ತಲುಪಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸದ್ಯ ಯಾವುದೇ ಅನುದಾನವಿಲ್ಲ ಎಂದು ನೆಪ ಹೇಳುತ್ತಿದ್ದಾರೆ ಎಂದು ಸ್ಥಳೀಯರಾದ ಜಾಕೀರ ಮುಲ್ಲಾ ಆರೋಪಿಸಿದ್ದಾರೆ. ರಸ್ತೆ ತಿರುವಿನಲ್ಲಿ ಸಿ.ಡಿ. ಇರುವುದರಿಂದ ಬೈಕ್, ಕಾರ್ ಓಡಾಟಕ್ಕೆ ತೀವ್ರ ಅಡಚಣೆಯಾಗಿದೆ. ಹಲವರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಬೈಕ್, ಕಾರಿನ ಚಕ್ರ ಗುಂಡಿಯಲ್ಲಿ ಸಿಲುಕಿ ತೊಂದರೆ ಪಟ್ಟಿದ್ದೂ ಇದೆ. ಆದ್ದರಿಂದ ಪಪಂ ಅಧಿಕಾರಿಗಳು ಕೂಡಲೆ ದುರಸ್ತಿ ಮಾಡಬೇಕಿದೆ.
ರಟ್ಟಿಹಳ್ಳಿ ಪಟ್ಟಣದ ಟಿಪ್ಪು ನಗರದಲ್ಲಿನ ಒಡೆದ ಸಿ.ಡಿ.ಯ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
| ರಾಜರಾಮ ಪವಾರ, ಪ.ಪಂ. ಮುಖ್ಯಾಧಿಕಾರಿ ರಟ್ಟಿಹಳ್ಳಿ