More

    ಕಲ್ಲುಗಣಿ ಉತ್ಪನ್ನ ಸಾಗಣೆಗೆ ಜಿ.ಪಿ.ಎಸ್ ಕಡ್ಡಾಯ -ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸೂಚನೆ – ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ

    ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಪ್ರವೇಶಿಸುವ ಇತರೆ ಜಿಲ್ಲೆಗಳ ಕಲ್ಲುಗಣಿ ಗುತ್ತಿಗೆ ಪಡೆದ ವಾಹನಗಳು ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಇಲ್ಲದಿದ್ದಲ್ಲಿ ಕಲ್ಲು, ಮರಳು ಸಾಗಣೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.
    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ನೆರೆಯ ವಿಜಯನಗರ, ಹಾವೇರಿ ಹಾಗೂ ಇತರ ಜಿಲ್ಲೆಗಳಿಂದ ಬರುವ ಕಲ್ಲುಗಣಿ ಉತ್ಪನ್ನ ಸಾಗಿಸುವ ಟ್ರ್ಯಾಕ್ಟರ್, ಲಾರಿ ಅಥವಾ ಇತರೆ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದೆ ಎಂದರು.
    ಹೊನ್ನಾಳಿ, ಹರಿಹರ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ, ಸಾಗಾಣಿಕೆಗಳು ಹೆಚ್ಚಿವೆ. ತಾಲೂಕು ಮಟ್ಟದಲ್ಲಿ ಈಗಾಗಲೇ ರಚಿಸಲಾದ ಚಾಲಿತ ತನಿಖಾ ದಳಗಳು ಹೆಚ್ಚು ಜಾಗ್ರತೆ ವಹಿಸಬೇಕೆಂದು ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಮರಳು ಬ್ಲಾಕ್‌ಗಳನ್ನು ಗುರುತಿಸಿ, ಆ ಪ್ರದೇಶದಲ್ಲಿ ಮರಳನ್ನು ಹೊರ ತೆಗೆಯಲು ಅಗತ್ಯ ಕ್ರಮ ಕೈಗೊಳ್ಳಲೂ ಸೂಚನೆ ನೀಡಿದರು.
    ಉಪವಿಭಾಗಾಧಿಕಾರಿ ದುರ್ಗಾಶ್ರೀ ಮಾತನಾಡಿ ಪಟ್ಟಾ ಅಥವಾ ಸರ್ಕಾರಿ ಜಮೀನುಗಳಲ್ಲಿ ನಿಯಮದಂತೆ 3 ಅಡಿ ಮಣ್ಣನ್ನು ತೆಗೆಯಲು ಅವಕಾಶವಿದೆ. ಆದರೆ ಹರಿಹರ ತಾಲೂಕು ವ್ಯಾಪ್ತಿಯಲ್ಲಿ 10 ಅಡಿಗಿಂತ ಆಳವಾಗಿ ಮಣ್ಣನ್ನು ಅಗೆದಿರುವುದು ಕಂಡು ಬಂದಿದೆ ಎಂದು ಪ್ರಸ್ತಾಪಿಸಿದರು.
    ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹರಿಹರ ತಾಲೂಕಿನ ಇಟ್ಟಿಗೆ ತಯಾರಿಕಾ ಘಟಕಗಳು ಇಟ್ಟಿಗೆ ತಯಾರಿಸಲು ಅವಶ್ಯಕವಾದ ಮಣ್ಣನ್ನು ತೆಗೆದುಕೊಳ್ಳಲು ನಿರ್ದಿಷ್ಟ ಗೋಕಟ್ಟೆ, ಕೆರೆ ಪ್ರದೇಶಗಳನ್ನು ನಿಗದಿಪಡಿಸಬೇಕಿದೆ. ನಗರ ಪ್ರದೇಶದ ಪಟ್ಟಾ ಜಾಗ ಹಾಗೂ ಕೆರೆ ಪ್ರದೇಶಗಳಲ್ಲಿ 3 ಅಡಿಗಿಂತ ಹೆಚ್ಚು ಮಣ್ಣನ್ನು ತೆಗೆಯದಂತೆ ಸೂಚನೆ ನೀಡಬೇಕೆಂದು ತಿಳಿಸಿದರು.
    ವಾಹನದ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲ್ಲು, ಮಣ್ಣು ಖನಿಜಗಳನ್ನು ಲೋಡ್ ಮಾಡದೇ, ಹೆಚ್ಚಿನ ಪ್ರಮಾಣದಲ್ಲಿ ಕಲ್ಲು, ಮಣ್ಣು ಇತರೆ ಖನಿಜಗಳನ್ನು ಸಾಗಿಸುವ ವಾಹನಗಳನ್ನು ಪರಿಶೀಲಿಸಬೇಕು. ಅಂತಹ ವಾಹನಗಳ ಮೇಲೆ ನಿಯಮಾನುಸಾರ ದಂಡ ವಿಧಿಸಬೇಕು. ಈಗಾಗಲೇ ಜಿಲ್ಲೆಯ ಹರಿಹರ ಮತ್ತು ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ತಿಳಿಸಿದರು.
    ಹಿರಿಯ ಭೂ ವಿಜ್ಞಾನಿ ರಶ್ಮಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 11 ಕಲ್ಲು ಪುಡಿ ಮಾಡುವ ಘಟಕಗಳಿದ್ದು, ಅದರಲ್ಲಿ 6 ಘಟಕಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕ್ರಷರ್ ಚಾಲನೆ ಮಾಡಲು ಸುರಕ್ಷಿತ ವಲಯವೆಂದು ಘೋಷಿಸಬೇಕಾಗಿರುವ ಅರ್ಜಿಯ ಕುರಿತು ಜಂಟಿ ತಪಾಸಣೆ ನಡೆಸಿದ್ದು, ಜಂಟಿ ಸ್ಥಳ ತನಿಖಾ ವರದಿ ಸಲ್ಲಿಕೆಯಾಗಿದೆ ಎಂದರು.
    ರೈಲ್ವೆ ಕಾಮಗಾರಿಗಾಗಿ ಅನುಮತಿ ಕೋರಿ ಜಿಲ್ಲೆಯ ಆನಗೋಡು, ಹಾಲವರ್ತಿ, ಹುಣಸೇಕಟ್ಟೆ ಮತ್ತು ಚಟ್ಟೋಬನಹಳ್ಳಿ ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಪ್ರದೇಶದಲ್ಲಿ ತಾತ್ಕಾಲಿಕ ಮೊಬೈಲ್ ಕ್ರಷರ್ ಘಟಕ ಸ್ಥಾಪನೆಗೆ ಮೆ. ಅಶೋಕ ಬಿಲ್ಡ್ ಕಾನ್ ಲಿಮಿಟೆಡ್‌ನಿಂದ ಅರ್ಜಿ ಬಂದಿದೆ ಎಂದು ತಿಳಿಸಿದರು.
    ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಭೂ ವಿಜ್ಞಾನಿ ವಿನಯಾ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಡಿಎಚ್‌ಒ ಡಾ.ಎಸ್.ಷಣ್ಮುಖಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts