ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕರೊನಾ ದೈನಿಕ ಸೋಂಕಿನ ಸಂಖ್ಯೆ ಗಗನಮುಖಿಯಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚು ಆತಂಕ ಹೆಚ್ಚಿಸುತ್ತಲೇ ಇದೆ. ಇದೇ ಮೊದಲ ಬಾರಿಗೆ ಶುಕ್ರವಾರ 700ನ್ನು ಮೀರುವ ಮೂಲಕ ಕರೊನಾ ಹೊಸದಾದ ಭಯಾನಕ ದಾಖಲೆ ಬರೆದಿದೆ. ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನತಾ ಕರ್ಫ್ಯೂವನ್ನು ಯಶಸ್ವಿಗೊಳಿಸುವ ಮೂಲಕ ಚೀನಿ ವೈರಸ್ ಹರಡುವಿಕೆ ಸರಪಳಿಯನ್ನು ತುಂಡರಿಸಬೇಕಾದ ಅವಶ್ಯಕತೆಯನ್ನು ಅಂಕಿ ಸಂಖ್ಯೆಗಳು ಸಾರಿ ಹೇಳುತ್ತಿವೆ.
ಶುಕ್ರವಾರದ ಪ್ರಯೋಗಾಲಯ ವರದಿಯಲ್ಲಿ 703 ಜನರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 3751ಕ್ಕೆ ತಲುಪಿದೆ. 424 ಜನರ ಆರೋಗ್ಯ ಸುಧಾರಿಸಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಚೀನಿ ವೈರಸ್ ದಾಳಿಗೆ ಶುಕ್ರವಾರ 7 ಜನ ಬಲಿಯಾಗಿದ್ದಾರೆ. ಕೋವಿಡ್-19 ಕಾಯಿಲೆಯಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ 703ಕ್ಕೆ ಜಿಗಿದಿದೆ.
ರಾಜ್ಯದಲ್ಲಿ ಜಿಲ್ಲಾವಾರು ಸೋಂಕಿನ ಸಂಖ್ಯೆಯಲ್ಲಿ ಧಾರವಾಡವು 12ನೇ ಸ್ಥಾನದಲ್ಲಿದೆ. ಇದು ಅತ್ಯಂತ ಅಪಾಯಕಾರಿ ಹಂತವಾಗಿದೆ. ಪ್ರತಿದಿನ ಹುಬ್ಬಳ್ಳಿ ಕಿಮ್್ಸ ಮತ್ತು ಧಾರವಾಡದ ಡಿಮ್ಹಾನ್ಸ್ನ ಪ್ರಯೋಗಾಲಯದಲ್ಲಿ 2000ದಷ್ಟು ಜನರ ಗಂಟಲ ದ್ರವ ಪರೀಕ್ಷೆ ನಡೆಯತ್ತಿದೆ. ಸದ್ಯ ಇರುವ ಪ್ರಮಾಣದಲ್ಲೇ ಇನ್ನೂ ಕೆಲವು ದಿನ ಸೋಂಕಿತರು ಪತ್ತೆಯಾದಲ್ಲಿ ರಾಜಧಾನಿಯ ಪರಿಸ್ಥಿತಿ ಬರುವ ಅಪಾಯವಿದೆ. ಹೀಗಾಗಿ, ಸರ್ಕಾರದ ಕರೊನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅನಿವಾರ್ಯತೆ ಇದೆ.