ಸಾಗರ: ನಗರದ ಗೌತಮ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ತಾಲೂಕು ಬ್ರಾಹ್ಮಣ ಸಂಘ, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಜೋಶಿ ಫೌಂಡೇಷನ್ನಿಂದ ಕರೊನಾ ಮಹಾಮಾರಿ ಮೂಲೋಚ್ಛಾಟನೆಗೆ ಪ್ರಾರ್ಥಿಸಿ ಶುಕ್ರವಾರ ರುದ್ರಮಂತ್ರ ಪಠಿಸಲಾಯಿತು.
ಅರ್ಚಕರಾದ ದರ್ಶನ್ ಭಟ್, ಸುದೇಶ್ ಭಟ್, ಶ್ರೀಶ, ನಾರಾಯಣ ದತ್ತ ಮತ್ತು ಶ್ರೀನಿವಾಸ್ ಸಾರಥ್ಯದಲ್ಲಿ ರುದ್ರಮಂತ್ರ ಪಾರಾಯಣ ಮೂಲಕ ರುದ್ರದೇವನನ್ನು ಸಂತೃಪ್ತಿಗೊಳಿಸುವ ಧಾರ್ವಿುಕ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆಯಿತು.
ನಿವೃತ್ತ ಪ್ರಾಚಾರ್ಯ ಆರ್.ಎಂ.ಬಾಪಟ್ ಮಾತನಾಡಿ, ಜಗತ್ತು ಕರೊನಾ ಭೀತಿಯಿಂದ ತತ್ತರಿಸಿದೆ. ಇಂತಹ ಸಂಕಷ್ಟದಲ್ಲಿ ಇತರೆ ದೇಶಗಳಿಗಿಂತ ಭಾರತ ಅತ್ಯಂತ ಸುರಕ್ಷಿತವಾಗಿದೆ. ಸನಾತನ ಪರಂಪರೆ ಕಟ್ಟಿಕೊಟ್ಟ ನಮ್ಮ ಸಂಸ್ಕೃತಿ, ಈ ಮಣ್ಣಿನ ವಿಶೇಷ ಪ್ರಭಾವವೇ ನಾವು ಕರೊನಾದಿಂದ ಸುರಕ್ಷಿತವಾಗಿರಲು ಕಾರಣ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಯುವ ಜನಾಂಗ ಗ್ರಾಮಾಂತರ ಪ್ರದೇಶದಿಂದ ನಗರಗಳತ್ತ ವಲಸೆ ಹೋಗಿ ಗ್ರಾಮಗಳು ವೃದ್ಧಾಶ್ರಮಗಳಾಗಿವೆ. ತಂದೆ ತಾಯಿ ಅನಾಥರಾಗಿದ್ದಾರೆ. ಆದರೆ ವೈದಿಕ ವೃತ್ತಿಯಲ್ಲೆ ಸಂತೃಪ್ತಿ ಪಡೆದ ಯುವಕರು ನಗರಗಳತ್ತ ಆಕರ್ಷಿತರಾಗದೇ ಇಲ್ಲಿಯೇ ಇದ್ದು ನಮ್ಮ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಪ್ರಮುಖರಾದ ವೈ.ಮೋಹನ್, ಬದರೀನಾಥ್, ಜಿ.ಕೆ.ಮುರಳೀಧರ ಹತ್ವಾರ್, ರವೀಶ್ ಕುಮಾರ್ ಇದ್ದರು.</