ಸಿದ್ದಾಪುರ: ಕರೊನಾದಿಂದಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಾಕಷ್ಟು ಧಕ್ಕೆಯಾಗಿದೆ. ಅದರಲ್ಲೂ ನಾಡಿನ ವಿಶೇಷ ಕಲೆಯಾದ ಯಕ್ಷಗಾನವನ್ನೆ ನಂಬಿರುವ ಸಾಕಷ್ಟು ಕಲಾವಿದರು ತೊಂದರೆ ಅನುಭವಿಸುವಂತಾಗಿದೆ ಎಂದು ಸಿದ್ದಾಪುರ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಮಂಗಳವಾರ ಅನಂತ ಯಕ್ಷ ಕಲಾ ಪ್ರತಿಷ್ಠಾನ ಆಯೋಜಿಸಿದ್ದ ಮಹಾ ಬ್ರಾಹ್ಮಣ ಯಕ್ಷಗಾನ ದಾಖಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ತರಬೇತಿಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಮಹಿಳೆಯರು-ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಆಶಾದಾಯಕವಾಗಿದ್ದು, ಈ ಮೊದಲಿನಂತೆ ಯಕ್ಷಗಾನ ಹಾಗೂ ಮತ್ತಿತರ ಸಾಂಸ್ಕೃತಿಕ ಚಟುವಟಿಕೆ ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಈ ನೆಲದ ಶ್ರೇಷ್ಠ ಕಲೆ ಯಕ್ಷಗಾನ ಮತ್ತು ತಾಳಮದ್ದಳೆ ಅದರ ದಾಖಲೀಕರಣ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದರು.
ಯಕ್ಷಗಾನ ಅಭಿಮಾನಿ ಎಂ. ಎಲ್. ಭಟ್ಟ ಸಾಗರ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಅನಂತ ಯಕ್ಷಕಲಾ ಪ್ರತಿಷ್ಠಾನದ ಸಂಚಾಲಕ ಕೇಶವ ಹೆಗಡೆ ಕೊಳಗಿ, ಜಿ.ಕೆ. ಭಟ್ಟ ಕಶಿಗೆ, ಗಣಪತಿ ಹೆಗಡೆ ಗುಂಜಗೊಡ ನಿರ್ವಹಿಸಿದರು.
ನಂತರ ಮಹಾಬ್ರಾಹ್ಮಣ ಯಕ್ಷಗಾನ ದಾಖಲೀಕರಣ ನಡೆಯಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ಪ್ರಸನ್ನ ಹೆಗ್ಗಾರ ಸಹಕರಿಸಿದರು. ಮುಮ್ಮೇಳದಲ್ಲಿ ವಿ. ಉಮಾಕಾಂತ ಭಟ್ಟ ಕೆರೇಕೈ, ಕೃಷ್ಣಯಾಜಿ ಬಳಕೂರು, ವಿನಾಯಕ ಹೆಗಡೆ ಕಲಗದ್ದೆ, ಅಶೋಕ ಭಟ್ಟ ಸಿದ್ದಾಪುರ, ಶಂಕರ ಹೆಗಡೆ ನೀಲಕೋಡು, ಶ್ರೀಧರ ಹೆಗಡೆ ಚಪ್ಪರಮನೆ, ನರಸಿಂಹ ಚಿಟ್ಟಾಣಿ, ಪ್ರಭಾಕರ ಹಣಜೀಬೈಲ್, ವೆಂಕಟೇಶ ಬೊಗ್ರಿಮಕ್ಕಿ, ಪ್ರಣವ ಭಟ್ಟ ಸಿದ್ದಾಪುರ, ಅವಿನಾಶ ಕೊಪ್ಪ, ರವಿ ಕೊಂಡ್ಲಿ, ಪುರಂದರ ಮೂಡ್ಕಣಿ, ತುಳಸಿ ಹೆಗಡೆ ವಿವಿಧ ಪಾತ್ರ ನಿರ್ವಹಿಸಿದರು.