ಗೋಕಾಕ, ಬೆಳಗಾವಿ: ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಮತ್ತು ಶ್ರೀಮಂತವಾದ ಭಾಷೆಯಾಗಿದೆ. ಅದರಲ್ಲೂ ಹಳೆಗನ್ನಡ ಭಾಷೆಯು ಸಮೃದ್ಧ ತೆಯಿಂದ ಕೂಡಿದೆ. ಭಾಷಾ ಬೋಧಕರು ಹಳೆಗನ್ನಡ ಭಾಷೆಯನ್ನು ಅಧ್ಯಯನ ಮಾಡಿ ಅದರ ಸಾರವನ್ನು ಮಕ್ಕಳಿಗೆ ಉಣಬಡಿಸಬೇಕು ಎಂದು ಪ್ರೊ. ಗುರುಪಾದ ಮರಿಗುದ್ದಿ ಹೇಳಿದರು. ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕನ್ನಡ ಭಾಷಾ ಬೋಧಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಡಾ. ಯಶವಂತ ಕೊಕ್ಕನವರ, ಪದ್ಯ ಬೋಧನೆಯಲ್ಲಿ ಬರುವ ಸವಾಲುಗಳ ಕುರಿತಾಗಿ ಮಾತನಾಡಿ, ಪದ್ಯಗಳ ರಸಾನುಭವವನ್ನು ಉಣಬಡಿಸಿದರು. ಹಳೆಗನ್ನಡ, ಹೊಸಗನ್ನಡ, ಜಾನಪದ ಮತ್ತು ವಚನಗಳನ್ನು ಹಾಡುವುದರೊಂದಿಗೆ ಪ್ರಭಾವಿ ಬೋಧನೆಯ ಅರಿವು ಮೂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಮಾತನಾಡಿ, ಕನ್ನಡ ನಾಡು, ನುಡಿ ಕಟ್ಟುವಲ್ಲಿ ಮತ್ತು ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ಕನ್ನಡ ಭಾಷಾ ಬೋಧಕರ ಪಾತ್ರ ಮಹತ್ವಪೂರ್ಣವಾಗಿದೆ ಎಂದರು. ಜಿಲ್ಲಾ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಣಾಧಿಕಾರಿ ರಾಜೇಂದ್ರ ತೇರದಾಳ, ಜಿಲ್ಲಾಧ್ಯಕ್ಷ ಶಿವಾನಂದ ಗುಂಡಾಳಿ, ತಾಲೂಕಾಧ್ಯಕ್ಷ ಟಿ.ಬಿ. ಬಿಲ್ಲ್, ಗ್ರಾಪಂ ಸದಸ್ಯ ಸುರೇಶ ಸನದಿ, ಶಿಕ್ಷಕ ಎಂ.ಬಿ. ಹಾದಿಮನಿ, ಮಾಳಿ, ಎಂ.ಐ.ಮುಕಾರ್ತಿಹಾಳ ಇತರರಿದ್ದರು.