ದಾವಣಗೆರೆ : ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಈ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ಒಬ್ಬರಿಗೇ ಆಸ್ತಿ ಕೊಡಕ್ಕಾಗುತ್ತಾ? ಪಕ್ಷ ಬೆಳೆಯಬೇಕು ಎಂದಾಗ ಕೆಲ ಸಂದರ್ಭದಲ್ಲಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುವುದು ಇದ್ದೇ ಇರುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ ನೀಡಿದರು.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರಿಯುತ್ತಾರಾ?’ ಎಂಬ ಪ್ರಶ್ನೆಗೆ ಈ ಗೊಂದಲದ ಹೇಳಿಕೆ ನೀಡಿದರು.
ಎರಡೂವರೆ ವರ್ಷಕ್ಕೆ ಸಿಎಂ ಸ್ಥಾನ ಹಂಚಿಕೆಯಾಗಿದೆ ಎಂಬುದು ನನಗೆ ತಿಳಿದಿಲ್ಲ. ವರಿಷ್ಠರು ಈ ಬಗ್ಗೆ ನಿರ್ಧರಿಸುತ್ತಾರೆ ಎಂದರು. ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳುತ್ತದೆಂಬುದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭ್ರಮೆ ಮಾತ್ರ. ಅದಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ ಎಂದೂ ಪ್ರತಿಕ್ರಿಯಿಸಿದರು.
ಬಿ.ಕೆ. ಹರಿಪ್ರಸಾದ್ ಮತ್ತು ಸಿದ್ದರಾಮಯ್ಯ ನಡುವೆ ವಿಷಯ ಭೇದ ಇರಬಹುದೇ ಹೊರತು ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದ ತಿಮ್ಮಪ್ಪ, ಹಿಂದುಳಿದವರ ಸಮಾವೇಶ ಮಾಡುವುದಾಗಿ ಹೇಳಿರುವ ಹರಿಪ್ರಸಾದ್ ಒಳ್ಳೆಯ ಕಾರ್ಯಕರ್ತ. ಅವರು ಕೇಳುವ ಜವಾಬ್ದಾರಿ ನೀಡಲು ರಾಜ್ಯ ಸರ್ಕಾರ ತಯಾರಿದೆ ಎಂದು ಹೇಳಿದರು.
ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ ತಿಮ್ಮಪ್ಪ, ಆಯನೂರು ಮಂಜುನಾಥ್ ಕಾಂಗ್ರೆಸ್ಗೆ ಬರುವುದಾಗಿ ಹೇಳಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ನಾವು ಆಪರೇಷನ್ ಹಸ್ತ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ನೋಡಿ ಬಿಜೆಪಿಯಿಂದ ಹಲವು ಶಾಸಕರು ಬರುವ ವಾತಾವರಣವಿದೆ ಎಂದರು.