ಧಾರವಾಡ: ಸ್ವರ ಲೋಕದ ಮಾಂತ್ರಿಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಗರಡಿಯಲ್ಲಿ ಪಳಗಿದ ಗಾಯಕಿ ಸಂಗೀತಾ ಕಟ್ಟಿ, ಗಾನ ಗಾರುಡಿಗನ ಅಗಲಿಕೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸದ್ಯ ಇಲ್ಲಿಯ ಮನೆಯಲ್ಲಿರುವ ಅವರು ಪತ್ರಿಕೆಯೊಂದಿಗೆ ಮಾತನಾಡಿ, ನೆನಪುಗಳನ್ನು ಮೆಲುಕು ಹಾಕಿದರು. ಕನ್ನಡ ನಾಡಿಗೆ ಎಸ್ಪಿಬಿ ಒಂದು ವರ. ನಮ್ಮ ಸಹಸ್ರಾರು ಹಾಡುಗಳನ್ನು ಹಾಡಿ ಭುವನೇಶ್ವರಿಯ ಕೀರ್ತಿಯನ್ನು ಪ್ರಸಿದ್ಧಿಗೊಳಿಸಿದ್ದಾರೆ. ಅವರು ನನ್ನ ಪಾಲಿಗೆ ಗುರು ಶಕ್ತಿ. ಚಿಕ್ಕ ವಯಸ್ಸಿನಲ್ಲೇ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಬಲ್ಲೆ. ಶಾಲಾ ದಿನಗಳಿಂದಲೇ ಅವರು ನನ್ನ ಹಾಡನ್ನು ಗಮನಿಸಿದ್ದರು. ನನಗೆ ಹಾಡಿನ ವಿವಿಧ ಆಯಾಮ ಗೊತ್ತಿರದ ಸಮಯದಲ್ಲಿ ಅವರ ಪರಿಚಯ ಆಗಿದ್ದು ನನ್ನ ಜೀವನದ ದೊಡ್ಡ ತಿರುವು. ಅವರದ್ದು ಯಾವುದಕ್ಕೂ ನಿಲುಕದ ವ್ಯಕ್ತಿತ್ವ ಎಂದು ಸಂಗೀತಾ ಕಟ್ಟಿ ಭಾವುಕರಾಗಿ ನುಡಿದರು.</