ಹಾಸನ : ಸರ್ಕಾರದ ಯೋಜನೆಗಳು ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಪರಿಪೂರ್ಣವಾಗಿ ತಲುಪುತ್ತಿಲ್ಲ ಎಂದು ದಲಿತಪರ ಸಂಘಟನೆಗಳ ಮುಖಂಡ ದಂಡೋರ ಮಂಜುನಾಥ್ ಆರೋಪಿಸಿದರು.
ಚನ್ನರಾಯಪಟ್ಟಣ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜನಾಂಗಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಬದುಕಲು ಬಿಡಿ ಎಂದು ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆಗಳು ಹೇಳಿಕೊಳ್ಳಲು ಸಾಕಷ್ಟಿವೆ. ಅಪರೂಪಕ್ಕೆ ಸಭೆ ಬೇರೆ ಕರೆಯಲಾಗಿದೆ. ಆದರೆ ಯಾವ ಯಾವ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ ತೋರಿಸಿ? ಅಧಿಕಾರಿಗಳು ಇದ್ದರೆ ಮಾತ್ರ ಆಯಾ ಸಮಸ್ಯೆಗಳನ್ನು ಚರ್ಚಿಸಿ ಬಗೆಹರಿಸಲು ಸಾಧ್ಯ. ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದರು.
ಪಟ್ಟಣದ ಎಡಿ ಕಾಲನಿಯಲ್ಲಿ ಸುಮಾರು 447 ಪಡಿತರ ಚೀಟಿಗಳಿದ್ದರೂ ನಮಗೆ ಒಂದು ನ್ಯಾಯಬೆಲೆ ಅಂಗಡಿ ಕಲ್ಪಿಸಿಲ್ಲ. ತಾಲೂಕಿನಲ್ಲಿ ಹಿಂದುಳಿದ ಯಾವ ಜನಾಂಗದ ವ್ಯಕ್ತಿಗೆ ನ್ಯಾಯಬೆಲೆ ಅಂಗಡಿ ನೀಡಿದ್ದೀರಾ?. ಎಡಿ ಕಾಲನಿಗೆ ಪ್ರತ್ಯೇಕವಾಗಿ ನ್ಯಾಯಬೆಲೆ ಅಂಗಡಿ ಬೇಕೇ ಬೇಕು ಎಂದು ಆಗ್ರಹಿಸಿದರು. ಇದಕ್ಕೆ ಎಲ್ಲ ಮುಖಂಡರು ದನಿಗೂಡಿಸಿದರು.
ತಹಸೀಲ್ದಾರ್ ಬಿ.ಎಂ.ಗೋವಿಂದರಾಜು ಮಾತನಾಡಿ, ಇಂತಹ ಸಭೆಗೆ ಹಾಜರಾಗಿ ಮಾಹಿತಿ ನೀಡುವುದು ಅಧಿಕಾರಿಗಳ ಜವಾಬ್ದಾರಿ. ಆದರೆ ಯಾವ ಯಾವ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದಿಲ್ಲ ಎಂಬುದನ್ನು ಗಮನಿಸಿ ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಎಡಿ ಕಾಲನಿ ನಿವಾಸಿ ಮಂಜು ಮಾತನಾಡಿ, ಎಡಿ ಕಾಲನಿಯಲ್ಲಿ 18 ಕ್ಕೂ ಹೆಚ್ಚು ಮನೆಗಳು ಬಿದ್ದು 2-3 ವರ್ಷಗಳೇ ಕಳೆದಿವೆ. ಆದರೆ ಇದೂವರೆಗೂ ಯಾವುದೇ ಪರಿಹಾರ ಬಂದಿಲ್ಲ. ಆ ಕುಟುಂಬಗಳಿಗೆ ಯಾವುದೇ ಇಲಾಖೆ ಸೂರು ಕಲ್ಪಿಸಿಲ್ಲ. ಇನ್ನೂ ಎಷ್ಟು ದಿನ ಕಷ್ಟ ಅನುಭವಿಸಬೇಕು ಎಂದು ಅಳಲು ತೋಡಿಕೊಂಡರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಆಶ್ರಯ ಯೋಜನೆಯಡಿ 1400 ಮನೆಗಳು ಮಂಜೂರಾಗಿದ್ದು, ಮನೆ ಕಳೆದುಕೊಂಡಿರುವ ಸಾಕಷ್ಟು ಕುಟುಂಬಗಳನ್ನು ಗುರುತಿಸಿ ಆಯಾ ಗ್ರಾಪಂ ಮೂಲಕ ನೀಡಲಾಗುತ್ತಿದೆ ಎಂದರು.