ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಅಂಗವಾಗಿ ಶನಿವಾರ ಶ್ರೀ ರಾಮೇಶ್ವರ ದೇವರ ಮಹಾರಥೋತ್ಸವ ಸಹಸ್ರಾರು ಭಕ್ತಾದಿಗಳ ಮಂತ್ರ ಹಾಗೂ ಜಯಘೋಷದ ನಡುವೆ ಅದ್ದೂರಿಯಾಗಿ ನೆರವೇರಿತು. ರೈತರು ತಾವು ಬೆಳೆದಿದ್ದ ಅಡಕೆ, ಬಾಳೆ ಹಣ್ಣು ಮುಂತಾದ ಹೊಸ ಫಲಗಳನ್ನು ತೇರಿಗೆ ತೂರುವ ಮೂಲಕ ಕೃತಾರ್ಥ ಭಾವ ತಾಳಿದರು.
ಅಭಿಜಿನ್ ಮುಹೂರ್ತದಲ್ಲಿ ನಡೆದ ಎಳ್ಳಮಾವಾಸ್ಯೆ ಜಾತ್ರೆಯ ಎರಡನೇ ದಿನದ ಧಾರ್ಮಿಕ ಕಾರ್ಯದಲ್ಲಿ ಈ ವರ್ಷ ಸ್ಥಳೀಯರು ಮಾತ್ರವಲ್ಲದೆ ದೂರದ ಊರುಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ವಿಶೇಷ. ಸಂಪ್ರದಾಯದಂತೆ ದೇವಸ್ಥಾನದ ಆವರಣದಿಂದ ರಾಮಚಂದ್ರಾಪುರ ಮಠದವರೆಗೆ ರಥೋತ್ಸವ ಸಾಗಿತು. ಸಂಜೆ 5 ಗಂಟೆಯ ನಂತರ ರಥಬೀದಿ ಹಾಗೂ ಆಜಾದ್ ರಸ್ತೆ ಮಾರ್ಗವಾಗಿ ಪಟ್ಟಣದ ಚರ್ಚ್ ವೃತ್ತದವರೆಗೆ ಬರುವ ರಥಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸುವುದು ವಾಡಿಕೆ.
ಮಿತ್ರವೃಂದವು ಹತ್ತು ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿತ್ತು. ಕೊನೆಯ ದಿನವಾದ ಭಾನುವಾರ ಸಂಜೆ ತುಂಗಾ ನದಿಯಲ್ಲಿ ಅದ್ದೂರಿ ತೆಪ್ಪೋತ್ಸವ ಜರುಗಲಿದೆ.