ವಿಜಯಪುರ: ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿ ಚಾಲಕ ಕಂ ಮಾಲೀಕನನ್ನು ಯಾಮಾರಿಸಿದ ಖದೀಮರು ಕಾರ್ ನಲ್ಲಿದ್ದ 18 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ಭೀಮಾತೀರ ಖ್ಯಾತಿಯ ಚಡಚಣ ಪಟ್ಟಣದಲ್ಲಿ ಬುಧವಾರ ಹಾಡಹಗಲೇ ಇಂಥದ್ದೊಂದು ಕೃತ್ಯ ನಡೆದಿದೆ.
ಲೋಣಿ ಬಿಕೆ ಗ್ರಾಮದ ಸಿದ್ದಾರಾಮ ಕಾಪ್ಸೆ ಎಂಬುವರು ಯಾಮಾರಿ ಹಣ ಕಳೆದುಕೊಂಡ ವ್ಯಾಪಾರಿ.
ಚಡಚಣ ಕರ್ನಾಟಕ ಬ್ಯಾಂಕ್ ನಿಂದ ಬಿಡಿಸಿಕೊಂಡು ಹೋಗುವಾಗ ಕಾರ್ ಬೋನಟ್ ಮೇಲೆ ಆಯಿಲ್ ಚೆಲ್ಲಿದ ಕಿರಾತಕರು ಇಂಜಿನ್ ಆಯಿಲ್ ಸೋರಿಕೆಯಾಗುತ್ತಿದೆ ಗಮನಿಸಿ ಎಂದು ಸಿದ್ದರಾಮ ಕಾಪ್ಸೆಯ ಗಮನ ಬೇರೆಡೆ ಸೆಳೆದಿದ್ದಾರೆ. ಕಳ್ಳರ ಮಾತು ನಂಬಿದ ಸಿದ್ದಾರಾಮ ಕಾರ್ ಬೋನಟ್ ಎತ್ತಿ ಪರಿಶೀಲಿಸುತ್ತಿದ್ದಾಗ ಹಿಂಬದಿ ಸೀಟ್ ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ.
ಬಳಿಕ ಹಣ ಕಳುವಾದ ಬಗ್ಗೆ ಅರಿವಿಗೆ ಬರುತ್ತಿದ್ದಂತೆ ಕಂಗಾಲಾದ ಸಿದ್ದಾರಾಮ ಚಡಚಣ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಿಸಿ ಟಿವಿ ಪರಿಶೀಲಿಸುತ್ತಿದ್ದಾರೆ.