ಹುಬ್ಬಳ್ಳಿ: ಇಲ್ಲಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಮೂರು ದಿಗಳ ಕಾಲ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಇಂದಿರಾ ಗಾಜಿನ ಮನೆಯ ಆವರಣದ ಬಾವಿಯಲ್ಲಿ ಶುಕ್ರವಾರ ಸಂಜೆ ವಿಸರ್ಜಿಸಲಾಯಿತು.
ನೂರಾರು ಜನರು, ಭಕ್ತರ ಹಷೋದ್ಘಾರಗಳ ನಡುವೆ ಗಣೇಶನಿಗೆ ವಿದಾಯ ಹೇಳಲಾಯಿತು. ವಿಸರ್ಜನೆ ಪೂರ್ವ 5 ತಾಸು ಭವ್ಯ ಮೆರವಣಿಗೆ ನಡೆಯಿತು. ಎಲ್ಲವೂ ಶಾಂತಿಯುತವಾಗಿ ಸಂಪನ್ನಗೊಂಡಿತು.
ಬೋಲೋ ಗಜಾನನ ಮಹಾರಾಜ್ ಕೀ….ಜೈ., ಗಣಪತಿ ಬಪ್ಪಾ…ಮೋರಯಾ., ಭಾರತ ಮಾತಾ ಕೀ… ಜೈ, ಜೈ ಶ್ರೀರಾಮ ಘೊಷಣೆಗಳು ಮೊಳಗಿದವು.
ಡೊಳ್ಳು ವಾದ್ಯದ ಅಬ್ಬರ, ಭಜನೆ, ಝಾಂಜ್ ಹಾಗೂ ಭಕ್ತರ ಅಪಾರ ಉತ್ಸಾಹದ ನಡುವೆ ಮೆರವಣಿಗೆ ನಡೆಯಿತು. ವಿವಿಧ ಕಲಾ ಮೇಳಗಳು ಇದ್ದವು. ಭಗವಾದ್ವಜ ರಾರಾಜಿಸಿದವು. ಸಂಭ್ರಮ ಮುಗಿಲು ಮುಟ್ಟಿತ್ತು. ಮೆರವಣಿಗೆಯ ಉದ್ದಕ್ಕೂ ಡ್ರೋಣ್ ಕಣ್ಗಾವಲು ಇಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಸಂಜು ಬಡಸ್ಕರ, ಇತರರು ಇದ್ದರು. ರಾಣಿ ಚನ್ನಮ್ಮ ಗಜಾನನ ಉತ್ಸವ ಮಹಾಮಂಡಳಕ್ಕೆ 3 ದಿನಗಳ ಕಾಲ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ಮೂರ್ತಿ ಪ್ರತಿಷ್ಠಾಪನೆಗೆ ಹು ಧಾ ಮಹಾನಗರ ಪಾಲಿಕೆ ಅನುಮತಿ ನೀಡಿತ್ತು.