ದಾವಣಗೆರೆ: ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆ ಸಂಬಂಧ ಬೆಂಗಳೂರು ಅರಮನೆ ಮೈದಾನದಲ್ಲಿ ಸೆ. 9ರಂದು ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಆಯೋಜನೆಯಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿ ಜಿಲ್ಲಾಧ್ಯಕ್ಷ ಆರ್. ಪ್ರತಾಪ್ ತಿಳಿಸಿದರು.
ಜನವರಿಗೆ ಉಡುಪಿಯಲ್ಲಿ 15 ಲಕ್ಷ ಸಮಾಜದವರು ಭಾಗಿಯಾಗುವ ರಾಜ್ಯ ಸಮಾವೇಶ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಣವಾನಂದ ಸ್ವಾಮಿ ನೇತೃತ್ವದಲ್ಲಿ ಅರೇಮಲ್ಲಾಪುರದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದ್ದರ ಹಿನ್ನೆಲೆಯಲ್ಲಿ ಈಡಿಗ ಮಂಡಳಿ ಸ್ಥಾಪನೆಯಾಗಿದೆ. ಆದರೆ ಇದಕ್ಕೆ ಅಧ್ಯಕ್ಷರ ನೇಮಕ ಈವರೆಗೆ ಆಗಿಲ್ಲ. ಕೂಡಲೆ ಸರ್ಕಾರ ಕ್ರಮ ವಹಿಸಬೇಕು. ಕಾಂಗ್ರೆಸ್ ಪ್ರಣಾಳಿಕೆಯಂತೆ ನೀಡಿದ ಭರವಸೆಯಂತೆ ಮಂಡಳಿಗೆ 250 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಈಡಿಗ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ಸಮಾಜದ ಮುಖಂಡರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದು ನಿಲ್ಲಬೇಕು. ರಾಜ್ಯ ಸರ್ಕಾರ 2004 ರಲ್ಲಿ ಸೇಂದಿ, 2007 ರಲ್ಲಿ ಸಾರಾಯಿ ನಿಷೇಧಿಸಲಾಯಿತು. ಇದುವರೆಗೆ ಸಮಾಜದವರಿಗೆ ಪರ್ಯಾಯ ವ್ಯವಸ್ಥೆ ಆಗಿಲ್ಲ. ಆರ್ಯ ಈಡಿಗ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕುಲಶಾಸ್ತ್ರ ಅಧ್ಯಯನ ಕೂಡ ನಡೆದಿಲ್ಲ. ಇದೆಲ್ಲದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಮಹಾಮಂಡಳಿಯ ಜಿ.ಎಸ್. ವೆಂಕಟೇಶ್, ಇ. ರಾಜೇಶ್, ಟಿ.ಆರ್. ಜ್ಞಾನದೇವ, ಆರ್. ಹಾಲಸ್ವಾಮಿ, ಇ.ಗಿರೀಶ್, ಎಸ್.ಎನ್. ಸಂಪತ್, ಬಿಕೆ. ದಾನೇಶ್ ಸುದ್ದಿಗೋಷ್ಠಿಯಲ್ಲಿದ್ದರು.